ಕೊಪ್ಪಳ : ಮತ್ತೊಮ್ಮೆ ಮೋದಿ ಎನ್ನಿ, ಶಿವರಾಜ್ ತಂಗಡಗಿ ದುರಾಂಕರ ಇಳಿಯಬೇಕು. ಮೋದಿ ಎನ್ನುವ ಮೂಲಕ ಶಿವರಾಜ್ ತಂಗಡಗಿ ದುರಾಂಕರ ಇಳಿಸಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ನೀವು ದೇವರು ನೋಡಿ ಗುಡಿಗೆ ಹೋಗ್ತಿರೋ? ಪೂಜಾರಿ ನೋಡಿ ಹೋಗ್ತಿರೋ? ಇಲ್ಲಿ ದೇವರು ಬದಲಾಗಿಲ್ಲ, ಪೂಜಾರಿ ಬದಲಾಗಿದ್ದಾರೆ. ನಮ್ಮ ದೇವರು ಬಿಜೆಪಿ, ಮೋದಿ ಎನ್ನುವು ಮೂಲಕ ಕರಡಿ ಸಂಗಣ್ಣರಿಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಎಕಾನಮಿಕ್ಸ್ ನೀವು ತಿಳಿಯಬೇಕು. ಗಂಡನ ಹತ್ತಿರ ಕಿತ್ತುಕೊಂಡು ಹೆಂಡ್ತಿಗೆ ಕೊಡುವುದು. ಒಬ್ಬ ಗಂಡನ ಬಳಿ ಒಂದು ಬಾಟಲ್ಗೆ ತಿಂಗಳಿಗೆ ಒಂದು ಸಾವಿರ ಕಿತ್ತುಕೊಳ್ಳುವುದು. ಎರಡು ಬಾಟಲ್ಗೆ ಎರಡು ಸಾವಿರ. ಹೀಗೆ ಹಬ್ಬ, ಹರಿದನ ಬಂದ್ರೆ ಇನ್ನಷ್ಟು ಕಿತ್ತುಕೊಳ್ಳುವುದು. ಗೊತ್ತಾಗದಂತೆ ಗಂಡನ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರದ್ದು ಎಂದು ಲೇವಡಿ ಮಾಡಿದರು.
ನೀರಿಲ್ಲದೇ ತಲೆ ಬೋಳಿಸುವ ಕಲೆ
ನೀರಿಲ್ಲದೆ ತಲೆ ಬೋಳಿಸುವ ಕಲೆ ಕಾಂಗ್ರೆಸ್ ನವರದ್ದು. ಮತದಾರರ ತಲೆ ಬೋಳಿಸಿ ಟೋಪಿ ಹಾಕುವ ಕಲೆ ಸಿದ್ದರಾಮಯ್ಯನವರದ್ದು. ಹಗಲು ದರೋಡೆಗೆ ಇನ್ನೊಂದು ಹೆಸರೇ ಕಾಂಗ್ರೆಸ್. ಇವತ್ತು ಕಾಂಗ್ರೆಸ್ ಬಂದಾಗ ಪೊಲೀಸರು, ಡಾಕ್ಟರ್ ಬರಬೇಕು ಅಂದ್ರೆ ದುಡ್ಡು ಕೊಡಬೇಕು. ಮೇಷ್ಟ್ರು ಬರಬೇಕು ಅಂದ್ರು ದುಡ್ಡು ಕೊಡಬೇಕು. ಈ ಕಾಂಗ್ರೆಸ್ ಸೋಲಿಸಲು, ಮತ್ತೊಮ್ಮೆ ಮೋದಿ ಎನ್ನಿ ಎಂದು ಹೇಳಿದರು.
ಕರಡಿ ಸಂಗಣ್ಣರ ಕಪಾಳಕ್ಕೆ ಹೊಡೆಯಿರಿ
ಕೆಲವರಿಗೆ ಶಾಸಕರು, ಸಂಸದರನ್ನು ಮಾಡಿದ್ರು ಉಪಯೋಗವಿಲ್ಲ. ಪ್ರತಿ ಸಲ ಮೊಂಡುತನ ಮಾಡಿದ್ರೆ ಏನು ಮಾಡಬೇಕು. ಪ್ರತಿ ಬಾರಿ ಮೊಂಡಾಟ ಮಾಡಿದ್ರೆ ಏನು ಮಾಡಬೇಕು. ಕಪಾಳಕ್ಕೆ ಹೊಡೆಬೇಕು, ಮತದ ಮೂಲಕ ಕಪಾಳಕ್ಕೆ ಹೊಡೆಯಿರಿ ಎಂದು ಪರೋಕ್ಷವಾಗಿ ಕರಡಿ ಸಂಗಣ್ಣರ ಕಪಾಳಕ್ಕೆ ಹೊಡೆಯಿರಿ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದರು.