ಮಂಡ್ಯ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಾಲಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರದಾನಿ ನರೇಂದ್ರ ಮೋದಿ ತಮ್ಮ ಸ್ನೇಹಕೂಟಕ್ಕೆ ಸಾಲಮನ್ನಾ ಮಾಡಿದ್ದಾರೆ ಎಂದು ಕುಟುಕಿದ್ದಾರೆ.
ರೈತರು ಕೇವಲ ನ್ಯಾಯವನ್ನು ಕೇಳುತ್ತಿದ್ದಾರೆ. ನನ್ನ ಭಾರತ್ ಜೋಡೋ ಯಾತ್ರೆಯಲ್ಲಿ ರೈತರ ಸಂಕಷ್ಟಗಳನ್ನು ನೋಡಿದ್ದೇನೆ. ನಾವು ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಘೋಷಿಸಿದ್ದೇವೆ. ರೈತರು ಕೇಳುತ್ತಿದ್ದಾರೆ, ನಮ್ಮ ಸಾಲಮನ್ನಾ ಯಾಕೆ ಆಗ್ತಿಲ್ಲ ಅಂತ. ಈ ರಾಷ್ಟ್ರದಲ್ಲಿ ಶ್ರೀಮಂತರ ಸಾಲಮನ್ನಾ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸಂವಿಧಾನ ರಕ್ಷಣೆಗೆ ಹೋರಾಡುತ್ತಿದೆ. ಬಿಜೆಪಿ ಸಂವಿಧಾನ ಮುಗಿಸಲು ಯತ್ನಿಸುತ್ತಿದೆ. ಕೋಟ್ಯಾಧಿಪತಿಗಳ ಸರ್ಕಾರ ನಡೆಯುತ್ತಿದೆ. ನಾವು ಭರವಸೆ ಕೊಟ್ಟ ಗ್ಯಾರಂಟಿ ಈಡೇರಿಸಿದ್ದೇವೆ. ಅನ್ನಭಾಗ್ಯ ಯೋಜನೆ ಅಡಿ 1 ಕೋಟಿ ಕುಟುಂಬಕ್ಕೆ ಅಕ್ಕಿ ತಲುಪಿದೆ. ನಾವು ಪ್ರತಿ ತಿಂಗಳು 10 ಕಿಲೋ ಅಕ್ಕಿ ಕೊಡುತ್ತಿದ್ದೇವೆ. ಕರ್ನಾಟಕದಲ್ಲಿ 2,000 ಕೊಡುವ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ 10 ಸಾವಿರ ನೆರವು
ಕರ್ನಾಟಕ ಸರ್ಕಾರದಂತೆ ರಾಷ್ಟ್ರದಲ್ಲೂ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗುವುದು. ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಘೋಷಣೆ ಮಾಡಿದ್ದೇವೆ. ನಮ್ಮ ಸರ್ಕಾರ ಬಂದ್ರೆ ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದ 1 ಲಕ್ಷ ನೆರವು ನೀಡಲಾಗುವುದು. ಪ್ರತಿ ತಿಂಗಳು ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯದಿಂದ 10 ಸಾವಿರ ನೆರವು ಕೊಡುತ್ತೇವೆ. ಮಹಿಳೆಯರಿಗೆ ಒಂದು ಲಕ್ಷದ ಜೊತೆಗೆ ನಿರುದ್ಯೋಗಿ ಯುವಕರಿಗೂ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.