ಮಂಡ್ಯ : ಪ್ರಧಾನಿ ನರೇಂದ್ರ ಮೋದಿಯವರಿಗೆ ಚಾಮುಂಡೇಶ್ವರಿ ಶಕ್ತಿ ಕೊಡಲಿ. ನಮಗೆ ಕಾವೇರಿ ನ್ಯಾಯ ಸಿಗುತ್ತದೆ ಎಂದು ಮೋದಿಯನ್ನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಡಿ ಹೊಗಳಿದರು.
ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಪುತ್ರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪರ ಪ್ರಚಾರ ನಡೆಸಿ, ಅವರು ಮಾತನಾಡಿದರು.
ಕಾವೇರಿ ವ್ಯಾಪ್ತಿಯ ಎಲ್ಲಾ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. 10 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಗೆಲ್ಲಿಸಿ. ಮೋದಿ ಹತ್ತಿರ ಮೇಕೆದಾಟು ಬಗ್ಗೆ ಮಾತನಾಡಬೇಕು. ನಮಗೆ 200 ವರ್ಷದಿಂದ ಆಗಿರುವ ಅನ್ಯಾಯ, ಮೋದಿ ಅವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು. ಅವರಿಗೆ ಈ ದೇಶವನ್ನು ಆಳುವ ಶಕ್ತಿಯನ್ನು ಚಾಮುಂಡೇಶ್ವರಿ ಕೊಡಲಿ. ನಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತೆ ಎಂದು ಹೇಳಿದರು.
ಮೇಕೆದಾಟುಗೆ ಮೋದಿ ಅನುಕೂಲ ಮಾಡ್ತಾರೆ
ಕುಮಾರಸ್ವಾಮಿ ಎದುರು ನಿಂತಿರುವ ವ್ಯಕ್ತಿ ಹಣದಲ್ಲಿ ಗಟ್ಟಿಗರು. ಕುಮಾರಸ್ವಾಮಿ ಗೆದ್ದಿದ್ದಾರೆ ಅಂತ ಯಡಿಯೂರಪ್ಪ ಅವರು ಹುಟ್ಟೂರು ಬೂಕನಕೆರೆಯಲ್ಲಿ ಹೇಳಿದ್ದಾರೆ. ಜನ ಶಕ್ತಿ ತೋರಿಸಿ ಕುಮಾರಸ್ವಾಮಿಯವರನ್ನು ಗೆಲ್ಲಿಸಿ ಕೊಡಿ. ಕಾವೇರಿಗಾಗಿ ಹೋರಾಟ ಮಾಡಿ ಮೋದಿ ಅವರಿಗೆ ಶಕ್ತಿ ಕೊಡೋಣ. ಒಟ್ಟಾಗಿ ಹೋರಾಟ ಮಾಡೋಣ. ಮೇಕೆದಾಟು ಬಗ್ಗೆ ನರೇಂದ್ರ ಮೋದಿ ಸರ್ಕಾರ ನಮಗೆ ಅನುಕೂಲ ಮಾಡುತ್ತೆ ಎಂದು ತಿಳಿಸಿದರು.
ನಾನು ಏನು ಮಾಡಿದ್ದೇನೆ ಅನ್ನೋದನ್ನ ಹೇಳ್ತೀನಿ
ಒಕ್ಕಲಿಗ ನಾಯಕರ ಹೋರಾಟದ ವಿಚಾರವಾಗಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಚಲುವರಾಯಸ್ವಾಮಿಗೆ ಸವಾಲು ಹಾಕಿದರು. ಈಗ ಚುನಾವಣೆ ಸಂದರ್ಭ ಆ ವಿಚಾರ ಬೇಡ. ಇದೇ 27, 28ಕ್ಕೆ ಇದಕ್ಕಾಗೆ ನಾನು ಮಂಡ್ಯಕ್ಕೆ ಬರುತ್ತೇನೆ. ಎಲ್ಲಾ ಮಾಧ್ಯಮದವರು ಬನ್ನಿ. ನಾನು ಏನು ಮಾಡಿದ್ದೇನೆ ಅನ್ನೋದನ್ನ ಹೇಳ್ತೀನಿ. ಯಾರ್ರಿ ಇವ್ರೆಲ್ಲಾ..? ಎಂದು ಹೆಚ್.ಡಿ. ದೇವೇಗೌಡ ಹರಿಹಾಯ್ದರು.