ಬಾಗಲಕೋಟೆ : ರಾಜ ಬಲಿಷ್ಠ ಆಗಿದ್ದಾನೆ. ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಪ್ರಸಿದ್ಧ ಗುಳೇದಗುಡ್ಡದ ಇಲಾಳ ಮೇಳದ ಯುಗಾದಿ ರಾಜಕೀಯ ಭವಿಷ್ಯವಾಣಿ ತಿಳಿಸಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಮಾರವಾಡಿ ಬಗೀಚ್ ದಲ್ಲಿ ನಡೆಯುವ ಇಲಾಳ ಮೇಳದ ಸ್ಫಷಕ ಭವಿಷ್ಯ ಇದಾಗಿದೆ. ರಾಜಕೀಯ ಭವಿಷ್ಯದಲ್ಲಿ ಮೋದಿಯೇ ಮತ್ತೆ ಪ್ರಧಾನಿ ಎಂದು ನುಡಿಯಲಾಗಿದೆ.
ಪ್ರತಿ ವರ್ಷ ಯುಗಾದಿಯಂದು ಇಲಾಳ ಮೇಳದ ಭವಿಷ್ಯ ಹೊರ ಬರುತ್ತದೆ. ಮಳೆ, ಬೆಳೆ, ವ್ಯಾಪಾರ, ರಾಜಕೀಯ ಭವಿಷ್ಯ ನುಡಿಯುವ ಮೇಳ ಇದಾಗಿದೆ. ರಾಜಕೀಯದ ಬಗ್ಗೆ ಮಲ್ಲಿಕಾರ್ಜುನ ಗೊಬ್ಬಿ ನುಡಿದ ಭವಿಷ್ಯವಾಣಿ ಹೊರಬಿದ್ದಿದೆ.
ರಾಜ, ಮಂತ್ರಿಗಳು, ಸೈನ್ಯ ಬಲಿಷ್ಠ
ಈ ಬಾರಿ ದೇಶದಲ್ಲಿ ಈಗ ಇರುವ ರಾಜನೇ ಮತ್ತೆ ರಾಜ ಆಗ್ತಾನೆ. ರಾಜ, ಪ್ರಜೆಗಳು, ಮಂತ್ರಿಗಳು, ಸೈನ್ಯ ಬಲಿಷ್ಠವಾಗಿವೆ. ಅಧಿಕಾರ ಬೇಕು ಬೇಕು, ನಾವು ಆಳಬೇಕು ಅಂತ ಹೆಣಗಾಡುತ್ತಾರೆ. ನಿಷ್ಠೆಯಿಂದ ಸ್ಥಿರತೆ ಉಂಟಾಗುವ ಬಲ ಇದೆ ಎಂದು ಭವಿಷ್ಯ ವಾಣಿಯಲ್ಲಿ ಹೇಳಲಾಗಿದೆ.
ತೊಗರಿ, ಸಜ್ಜಿಗೆ ಕೀಟಬಾಧೆ ಜಾಸ್ತಿ
ಈ ವರ್ಷ ಹೆಸರು, ಬಿಳಿಜೋಳ, ಗೋಧಿ, ಕಡಲೆ ಉತ್ತಮ ಬೆಳೆ ಇದೆ. ತೊಗರಿ, ಸಜ್ಜಿಗೆ ಕೀಟಬಾಧೆ ಜಾಸ್ತಿ. ಎಳ್ಳು ತೇಜಿ ಆಗುತ್ತೆ. ಗುಳೇದಗುಡ್ಡ ಖಣ ಹಾಗೂ ಖಣದ ಸೀರೆ, ಇಳಕಲ್ ಸೀರೆ ವ್ಯಾಪಾರ ಸ್ವಲ್ಪ ಕಡಿಮೆ ಇದೆ. ಕಪಡಾ ವ್ಯಾಪಾರ ಚೆನ್ನಾಗಿ ಇರುತ್ತದೆ ಎಂದು ನುಡಿಯಲಾಗಿದೆ.