ಕಲಬುರಗಿ : ನೀವು ಅಧಿಕಾರಕ್ಕೆ ಬಂದು 10 ವರ್ಷ ಆಯಿತು. ಇನ್ನು ಪ್ರಚಾರಕ್ಕೆ ನಿಮಗೆ ಮುಸ್ಲಿಂ ಲೀಗ್ ಬೇಕಾ? ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 10 ವರ್ಷದಲ್ಲಿ ನೀವೇನು ಮಾಡಿದ್ದೀರಿ ಅಂತ ಮತ ಕೇಳಿ. ಅದು ಬಿಟ್ಟು ಹಿಂದೂ ಮುಸ್ಲಿಂ ಅಂತ ವಿವಾದ ತಂದು ಮತ ಕೇಳಬೇಕಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಜಿನ್ನಾ, ಮುಸ್ಲಿಂ ಲೀಗ್ ಬಿಟ್ಟು ಬಿಡಿ. ನೀವೇನು ಮಾಡಿದ್ದೀರಾ? ಅದರ ಬಗ್ಗೆ ಮಾತನಾಡಿ. ದೇಶ ವಿಭಜನೆಗೆ ಮೊದಲು ಪ್ರಸ್ತಾವ ಇಟ್ಟಿದ್ದೇ ವೀರ್ ಸಾರ್ವಕರ್. ಇತಿಹಾಸದ ಪುಟ ತೆಗದು ಮೋದಿಯವರು ನೋಡಲಿ. ಮೋದಿ ಸರ್ಕಾರದಿಂದ ಕನ್ನಡಿಗರು ಯಾವ ನೀರಿಕ್ಷೆನೂ ಇಟ್ಟುಕೊಳ್ಳಬಾರದು. ಅವರಿಗೆ ನಮ್ಮ ವೋಟು, ನೋಟು ಮಾತ್ರ ಬೇಕು ಎಂದು ಕುಟುಕಿದರು.
ಪುಸ್ತಕ ಓದಿದ್ರೆ ಅವರಿಗೂ ಗೊತ್ತಾಗುತ್ತೆ
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರವಾಗಿ ಮಾತನಾಡಿ, ಮೋದಿಯವರಿಗೆ ಮಾಹಿತಿ ಅವರ ಐಟಿ ಸೆಲ್ ನೀಡುತ್ತೆ. ಅದರ ಬದಲು ಅಲ್ಪ ಸ್ವಲ್ಪ ಪುಸ್ತಕ ಓದಿದ್ರೆ ಅವರಿಗೂ ಗೊತ್ತಾಗುತ್ತೆ. ಮುಸ್ಲಿಂ ಲೀಗ್ ಜೊತೆ ಮೈತ್ರಿ ಸರ್ಕಾರ ಮಾಡಿದ್ಯಾರು ಅಂತ? ಬಿಜೆಪಿಯ, ಆರ್ಎಸ್ಎಸ್, ಹಿಂದೂ ಮಹಾಸಭಾ ಮೈತ್ರಿ ಸರ್ಕಾರ ರಚಿಸಿತ್ತು. ಪಂಜಾಬ್ ಹಾಗೂ ಸಿಂಧ್ನಲ್ಲಿ ಸರ್ಕಾರ ರಚನೆ ಮಾಡಿತ್ತು ಎಂದು ಮೋದಿ ಹೇಳಿಕೆಗೆ ತೀರುಗೇಟು ನೀಡಿದರು.