ಕೋಲಾರ : ಬಿಸಿಲಿನಿಂದ ಕಮಲ ಬಾಡಿ ಹೋಗ್ತಿದೆ. ಕಮಲ ಕೆರೆಯಲ್ಲಿ ಇದ್ದರೆ ಚೆಂದ ಎಂದು ಬಿಜೆಪಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ದೇಶದಲ್ಲಿ ಶಕ್ತಿ ತುಂಬಬೇಕು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ‘ಕೈ’ ಬಲಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಚಿನ್ನದ ನಾಡು ಕೋಲಾರದ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾವೆಂದಿಗೂ ಚಿರಋಣಿ. ನಿಮ್ಮ ಬೆಂಬಲವೇ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆ. ನೀವು ನೀಡಿದ ಮತ ಹೊಸ ಬದಲಾವಣೆಗೆ ಕಾರಣವಾಗುತ್ತದೆ. ಕೋಲಾರದ ಚಿನ್ನದ ಮಕ್ಕಳು ನೀವು. ಹಾಲು, ತರಕಾರಿ ಬೆಳೆದು ಕೊಡ್ತಾ ಇದ್ದೀರಿ. ರಮೇಶ್ ಕುಮಾರ್ ಅವ್ರು ಬೆಂಗಳೂರಿನಿಂದ ಕೋಲಾರಕ್ಕೆ ನೀರು ತಂದುಕೊಟ್ಟಿದ್ದಾರೆ. ಇದೆಲ್ಲಾ ಸಿದ್ದರಾಮಯ್ಯ ಸರ್ಕಾರದಿಂದ ಆಗಿರೋದು. ಕಾಂಗ್ರೆಸ್ ಕೋಲಾರದ ಅಭ್ಯರ್ಥಿ ಗೌತಮ್ರನ್ನು ನಿಮ್ಮ ಮಗನಂತೆ ಸ್ವೀಕಾರ ಮಾಡಿ ಮತ ಹಾಕಬೇಕು ಎಂದು ಕರೆ ಕೊಟ್ಟಿದ್ದಾರೆ.
ಗ್ಯಾರಂಟಿ ನಿಶ್ಚಿತ, ಕಾಂಗ್ರೆಸ್ ಗೆಲುವು ಖಚಿತ
ಕಾಂಗ್ರೆಸ್ನ ನ್ಯಾಯ ಗ್ಯಾರಂಟಿಗಳು ದೇಶದ ಜನರಿಗೆ ನೆಮ್ಮದಿ ನೀಡಲಿವೆ. ಕಾಂಗ್ರೆಸ್ ಕೊಟ್ಟಿರುವ ‘ನ್ಯಾಯ್ ಪತ್ರ’ದ ಪ್ರಣಾಳಿಕೆ ಸತ್ಯ. ನ್ಯಾಯ್ ಪತ್ರ ಪ್ರಣಾಳಿಕೆ ಈಡೇರಿಸಲು ಕಾಂಗ್ರೆಸ್ ಬದ್ದ. ಯೋಜನೆಗಳ ಗ್ಯಾರಂಟಿ ನಿಶ್ಚಿತ, ಕಾಂಗ್ರೆಸ್ ಗೆಲುವು ಖಚಿತ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸುವ ವಿಶ್ವಾಸ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ನಿಮ್ಮ ಆಯ್ಕೆಯಾಗಲಿ ಎಂದು ಜನರಲ್ಲಿ ಮನವಿ ಮಾಡಿದೆ. ಕುರುಡುಮಲೆ ಗಣಪನ ಸನ್ನಿಧಾನದಲ್ಲಿ ಶಕ್ತಿ ಕೊಡುವಂತೆ ಪ್ರಾರ್ಥಿಸಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.