ಶಿವಮೊಗ್ಗ : ನಮ್ಮ ತಂದೆ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ಸಂಸದ ಆಗಲಿ ಅಂತ ಭಗವಂತ ನನಗೆ ಟಿಕೆಟ್ ತಪ್ಪಿಸಿದ್ದಾನೆ ಎಂದು ಕೆ.ಈ. ಕಾಂತೇಶ್ ಭಾವುಕರಾದರು.
ಶಿವಮೊಗ್ಗ ನಗರಮಟ್ಟದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಓಂ ಶಕ್ತಿ ಬಳಿ ಕೇಳಿಕೊಳ್ಳೋಣ ಎಂದು ಮನವಿ ಮಾಡಿದರು.
ಪ್ರತಿ ವರ್ಷ ಓಂ ಶಕ್ತಿ ಪ್ರವಾಸ ಮಹಿಳೆಯರು ಮಾಡುತ್ತಾರೆ. ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ. ನಮ್ಮ ಅಪ್ಪ ಶಿವಮೊಗ್ಗ ಎಂಪಿ ಆಗಲಿ. ಏಪ್ರಿಲ್ 12 ರಂದು ತಂದೆಯವರು ನಾಮಪತ್ರ ಸಲ್ಲಿಸುತ್ತಾರೆ. ನನಗೆ ಹದಿನೈದು ಸಾವಿರ ಅಕ್ಕ ತಂಗಿಯರಿದ್ದಾರೆ. ದಯಮಾಡಿ ನೀವೆಲ್ಲರೂ ಅಂದು ಬಂದು ನಮ್ಮನ್ನು ಆಶೀರ್ವಾದ ಮಾಡಿ ಎಂದು ಹೇಳಿದರು.
ಎದುರಾಳಿಗಳ ಎದೆ ನಡುಗಬೇಕು
ನಾನು ಏನು ತಪ್ಪು ಮಾಡಿದ್ದೇನೆ..? ಅಲ್ಲಿ ಒಂದು ಮನೆಯಲ್ಲಿ ಒಬ್ಬರು ಸಂಸದ ಹಾಗೂ ಒಬ್ಬರು ಶಾಸಕ ಇದ್ದಾರೆ. ಇರಲಿ ಪರವಾಗಿಲ್ಲ. ಆದರೆ, ನಾನು ಮಾಡಿರುವ ತಪ್ಪೇನು..? ಬಿಜೆಪಿ ಪಕ್ಷಕ್ಕೆ ಹಾಗೂ ಯಡಿಯೂರಪ್ಪರವರಿಗೆ ಪ್ರಶ್ನಿಸುತ್ತೇನೆ. ನಾಮಪತ್ರ ದಿನ ನಿಮ್ಮ ಉಪಸ್ಥಿತಿ ನೋಡಿ ಎದುರಾಳಿಗಳ ಎದೆ ನಡುಗಬೇಕು ಎಂದು ಕೆ.ಈ. ಕಾಂತೇಶ್ ಮತದಾರರಿಗೆ ಕರೆ ಕೊಟ್ಟರು.
ಹಿಂದೆ ಹೇಳಿದಂತೆ ಕಾಶಿಗೆ ಕಳಿಸುತ್ತೇನೆ
ಕೆ.ಎಸ್. ಈಶ್ವರಪ್ಪ ಮಾತನಾಡಿ, ಎಲ್ಲಾ ಮಹಿಳೆಯರಿಗೆ ಈ ಹಿಂದೆ ಹೇಳಿದಂತೆ ಕಾಶಿಗೆ ಕಳಿಸುತ್ತೇನೆ. ಅದರ ಪಕ್ಕದಲ್ಲೇ ಅಯೋಧ್ಯೆ ಕೂಡ ಇದೆ. ಅಲ್ಲಿಗೂ ಹೋಗಿ ಬರುವ ವ್ಯವಸ್ಥೆ ಮಾಡುತ್ತೇನೆ. ಸ್ವಲ್ಪ ಖರ್ಚು ನೀವು ಕೂಡ ಹಾಕಿಕೊಳ್ಳಬೇಕು. ಏಕೆಂದರೆ ನಾನೆ ಪೂರ್ತಿ ಖರ್ಚು ನೀಡಿದರೆ, ನನಗೆ ಆ ಪುಣ್ಯ ಲಭಿಸುತ್ತೆ. ಹೀಗಾಗಿ, ಸ್ವಲ್ಪ ಖರ್ಚು ನೀವು ಮಾಡಬೇಕು ಎಂದು ಹೇಳಿದರು.