Thursday, May 9, 2024

ನನ್ನ ಹೃದಯ ರಾಮನಗರ ಬಿಟ್ಟು ಎಲ್ಲೂ ಹೋಗಲ್ಲ : ಕುಮಾರಸ್ವಾಮಿ ಭಾವುಕ

ರಾಮನಗರ : ನನ್ನ ಹೃದಯ ರಾಮನಗರ ಬಿಟ್ಟು ಎಲ್ಲೂ ಹೋಗುವುದಿಲ್ಲ. ನನಗೆ ಜನ್ಮ ನೀಡಿದ್ದು ಹಾಸನ ಇದ್ರೂ ನನಗೆ ಶಕ್ತಿ ನೀಡಿದ್ದು ರಾಮನಗರ ಜನತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾವುಕರಾದರು.

ಚನ್ನಪಟ್ಟಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರಥ್ಯದಲ್ಲಿ ನಡೆದ ರೋಡ್‌ ಶೋನಲ್ಲಿ ಮಾತನಾಡಿದ ಅವರು, ಕಳೆದ ಎರಡು ಚುನಾವಣೆಯಲ್ಲೂ‌ ನಾನು ಪ್ರಚಾರಕ್ಕೆ ಬರದೇ ಇದ್ರೂ ನನ್ನನ್ನು ಗೆಲ್ಲಿಸಿದ್ದೀರಿ. ನನಗೆ ರಾಜಕೀಯವಾಗಿ ಜನ್ಮ ನೀಡಿದ ರಾಮನಗರ ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ‌. ಚನ್ನಪಟ್ಟಣ ಜನ ನನ್ನನ್ನು ಕ್ಷಮಿಸಬೇಕು. ಈ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಮಂಡ್ಯದಲ್ಲಿ ನಾನು 4 ರಂದು ನಾಮಪತ್ರ ಸಲ್ಲಿಸಿ, ರಾಮನಗರದಲ್ಲಿ ಮಂಜುನಾಥ್ ನಾಮಪತ್ರ ಸಲ್ಲಿಸುವ ವೇಳೆ ಬರ್ತಿನಿ. ದೇಶದಲ್ಲಿ ಮೋದಿ ಅವರು ಮತ್ತೊಮ್ಮ ಪ್ರಧಾನಿ ಆಗಬೇಕಾಗಿದೆ. ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ಕುಕ್ಕರ್ ಸೀರೆ, ಹಣ ಕೊಟ್ಟು ಚುನಾವಣೆ ಮಾಡ್ತಿದ್ದಾರೆ

ಅಮಿತ್ ಶಾ ಅವರು ಚನ್ನಪಟ್ಟಣದ ಗಂಡು ಮೆಟ್ಟಿದ ನೆಲದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ರಾಜ್ಯದ ಜನತೆಗೆ ಸಂದೇಶ ಕೊಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರು ಹಲವು ರೀತಿ ದುರ್ಬಳಕೆ ಮಾಡಿಕೊಂಡು ಚುನಾವಣೆ ನಡೆಸುತ್ತಿದ್ದಾರೆ. ಕುಕ್ಕರ್ ಸೀರೆ, ಹಣ ಕೊಟ್ಟು ಚುನಾವಣೆ ಮಾಡ್ತಿದ್ದಾರೆ. ಇದಕ್ಕೆಲ್ಲ ಜನ ಮಣಿಯಬಾರದು ಎಂದು ಹೇಳಿದರು.

ಜೆಡಿಎಸ್, ಬಿಜೆಪಿ ಒಂದು ದೇಹದ ಎರಡು ಕಣ್ಣುಗಳು

ಡಾ. ಮಂಜುನಾಥ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಒಳ್ಳೇಯ ಕೆಲಸ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಮೈತ್ರಿ ಅನಿವಾರ್ಯತೆ ಇದೆ. ಹಾಗಾಗಿ, ಬಿಜೆಪಿ ಹಾಗೂ ನಾವು ಒಟ್ಟಾಗಿದ್ದೇವೆ‌. ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಜೆಡಿಎಸ್, ಬಿಜೆಪಿ ಒಂದು ದೇಹದ ಎರಡು ಕಣ್ಣುಗಳು ಎಂದು ಭಾವಿಸುತ್ತೇನೆ. ಕಾಂಗ್ರೆಸ್ ನಾಯಕರು ಹೇಳ್ತಾರೆ ಜೆಡಿಎಸ್ ಸತ್ತೋಗಿದೆ ಅಂತ. ನೀವು ಇಂದು ಕೊಟ್ಟಿರೋ ಉತ್ತರ ಇಡೀ ರಾಜ್ಯಕ್ಕೆ ಗೊತ್ತಾಗಲಿದೆ ಎಂದು ಕಾಂಗ್ರೆಸ್​ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES