ಬಳ್ಳಾರಿ : ರೈತರು ರಾಜಕಾರಣಿಗಳಿಗೆ ಛೀಮಾರಿ ಹಾಕಿ ಸ್ವಾಗತ ಕೋರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿರುವ ಅವರು, ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳ ಕಡೆಗೆ ಗಮನಹರಿಸಿಲ್ಲ. ರಾಜಕೀಯ ಪಕ್ಷಗಳ ನಾಯಕರಿಗೆ ಹಳ್ಳಿಗಳಲ್ಲಿ ರೈತರು ಛೀಮಾರಿ ಹಾಕಿ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ದನಕರುಗಳಿಗೆ ಮೇವಿಲ್ಲ. 40 ಲಕ್ಷ ಕೃಷಿ ಬೋರ್ವೆಲ್ಗಳ ಪೈಕಿ 10 ಲಕ್ಷ ಬೋರ್ವೆಲ್ಗಳ ಬತ್ತಿವೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ. ರೈತರು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಕಾರಣಿಗಳು ಚುನಾವಣೆಯ ಗುಂಗಿನಲ್ಲಿದ್ದಾರೆ. ಜನ ಪರ ಕೆಲಸ ಮಾಡುತಿಲ್ಲ. ಪ್ರಚಾರಕ್ಕೆ ರಾಜಕಾರಣಿಗಳು ಹಳ್ಳಿಗಳಿಗೆ ಬಂದರೆ ಛೀಮಾರಿ ಹಾಕಿ ಸ್ವಾಗತ ನೀಡಬೇಕು ಎಂದು ತಿಳಿಸಿದ್ದಾರೆ.
ರೈತನನ್ನು ಕೇಂದ್ರ ಸರ್ಕಾರ ಕೊಲೆ ಮಾಡಿದೆ
ಬರಗಾಲದಲ್ಲಿ ರೈತರ ಸಾಲ ವಸೂಲಿ ಮಾಡಬಾರದು ಎಂಬ ಆದೇಶವಿದೆ. ಎಲ್ಲ ಬ್ಯಾಂಕ್, ಸಹಕಾರ ಸಂಘಗಳಿಗೆ ಸರ್ಕಾರದ ಆದೇಶ ನೀಡಿದೆ. ಬ್ಯಾಂಕುಗಳು ರೈತರನ್ನು ಸುಲಿಗೆ ಮಾಡುತ್ತಿವೆ. ಈ ಕೂಡಲೇ ಸಾಲ ವಸೂಲಾತಿ ನಿಲ್ಲಬೇಕು. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಜಾರಿಯೂ ಸೇರಿದಂತೆ ರೈತರಿಗೆ ತಾನೇ ನೀಡಿದ್ದ ಹಲವು ಭರವಸೆ ಮರೆತಿದೆ. ದೆಹಲಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಯುತ್ತಿದೆ. ರೈತನನ್ನು ಕೇಂದ್ರ ಸರ್ಕಾರ ಕೊಲೆ ಮಾಡಿದೆ ಎಂದು ಆರೋಪಿಸಿದ್ದಾರೆ.