ತುಮಕೂರು : ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಬೆಂಗಳೂರಿನ ಕೊಚ್ಚೆ ನೀರು ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, ಸೋಮಣ್ಣ ಯಾರಣ್ಣ ನೀನು.. ನಿನಗೂ ತುಮಕೂರಿಗೆ ಏನಣ್ಣ ಸಂಬಂಧ? ಎಂದು ಸೋಮಣ್ಣ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆ ಜನ ಅತ್ಯಂತ ಪ್ರಜ್ಞಾವಂತರು, ಅತ್ಯಂತ ಸ್ವಾಭಿಮಾನಿಗಳು. ದೇವೇಗೌಡರಂಥ ಮೇಧಾವಿಗಳನ್ನೇ ಮಣ್ಣು ಮುಕ್ಕಿಸಿದ ಜನ ನೀವು. ಇನ್ನು ಈ ಸೋಮಣ್ಣನ ಗೆಲ್ಲಿಸ್ತೀರಾ? ನಮ್ಮಪ್ಪರಾಣೆ ಗೆಲ್ಲಿಸೋಲ್ಲ.. ಗೆಲ್ಲಿಸಲೂ ಬಾರದು ಎಂದು ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ಯಾವನು ಇವನು ಸೋಮಣ್ಣ.. ಕೊಚ್ಚೆ ನೀರು
ಯಾವನು ಇವನು ಸೋಮಣ್ಣ.. ಅವನ ಪೇಪರ್ ಸ್ಟೇಟ್ ಮೆಂಟ್ ನೋಡಿದ್ದೀರಾ..? ಸೋಮಣ್ಣ ಹರಿಯೋ ನೀರಿದ್ದಂಗೆ, ಎಲ್ಲಿಗನಾ ಹರಿಯುತ್ತಿಯಾ ನೀನು..? ವರುಣಾದಿಂದ ತುಮಕೂರಿಗನಾ ಹರಿದಿದ್ದೀಯಾ.. ಇನ್ನೂ ಎಲ್ಲಿಗನಾ ಹರಿದುಕೊಂಡು ಹೋಗ್ತೀಯಪ್ಪಾ ನೀನು..? ನೆಲೆನೇ ಇಲ್ವಲ್ಲಪ್ಪಾ? ನೀನು ಎಲ್ಲಿಗನಾ ಹರಿಯುತ್ತಿಯಾ? ಇದು ಕೊಚ್ಚೆ ನೀರು ಎಂದು ಜರಿದಿದ್ದಾರೆ.
ಇದು ಕೊಚ್ಚೆನೇ ಸೇರುತ್ತೋ? ಸಮುದ್ರ ಸೇರುತ್ತೋ?
ಬೆಂಗಳೂರಿನ ಕೊಚ್ಚೆ ನೀರು ಇಲ್ಲೆಲ್ಲಾ ಹರಿದು ಮಲೀನ ಮಾಡಿದೆ. ಇಲ್ಲಿ ನಿಮ್ಮ ಜೀವನ ಯಾಕ್ ಮಾಲೀನ ಮಾಡಿಕೊಳ್ತೀರಾ..? ಈ ವ್ಯಕ್ತಿ ಸೋಮಣ್ಣನ ಗೆಲ್ಲಿಸಿ ಯಾಕ್ ಮಲೀನ ಮಾಡಿಕೊಳ್ತೀರಾ..? ಇದು ಕೊಚ್ಚೆನೇ ಸೇರುತ್ತೋ? ಸಮುದ್ರ ಸೇರುತ್ತೋ? ಇದು ಕುಡಿಯೋ ನೀರಲ್ಲ, ಬೆಳೆಯೋಕು ಯೋಗ್ಯ ನೀರಲ್ಲ ಎಂದು ಲೇವಡಿ ಮಾಡಿದ್ದಾರೆ.
ನಮ್ಮ ಮುದ್ದಹನುಮೇಗೌಡ್ರು ಪರಿಶುದ್ದವಾದ ನೀರು
ನಮ್ಮ ಮುದ್ದಹನುಮೇಗೌಡ್ರು ಅತ್ಯಂತ ಪರಿಶುದ್ದವಾದ ಕೆರೆ ನೀರು. ಮುದ್ದಹನುಮೇಗೌಡರನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಎಸ್.ಆರ್. ಶ್ರೀನಿವಾಸ್ ಮತಯಾಚನೆ ಮಾಡಿದ್ದಾರೆ.