ಕೊಪ್ಪಳ : ‘ಮೋದಿ.. ಮೋದಿ..’ ಎಂದು ಕೂಗುವ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಕಪಾಳಕ್ಕೆ ಹೊಡಿಬೇಕು ಎಂದು ಸಚಿವ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೀನಿ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು, ನೀಡಿದ್ದಾರಾ? ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ. ಇಂತವರಿಗೆ ಕಪಾಳಕ್ಕೆ ಹೊಡೆಯಬೇಕು ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನೂ 5 ರಿಂದ 10 ವರ್ಷ ಸುಳ್ಳು ಹೇಳ್ತಾರೆ
ಮೋದಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ 5 ರಿಂದ 10 ವರ್ಷ ಸುಳ್ಳು ಹೇಳ್ತಾರೆ. ಈ ಸುಳ್ಳು ಕೇಳಿಕೊಂಡು ಹೋಗಬೇಕಾ? ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡುತ್ತೀನಿ ಎಂದಿದ್ದರು, ಮಾಡಿದ್ದಾರಾ? ದೇಶವನ್ನು ಸ್ಮಾರ್ಟ್ ಆಗುವ ಬದಲು ಮೋದಿ ತಾವೇ ಸ್ಮಾರ್ಟ್ ಆಗಿದ್ದಾರೆ. ಈಗ ಸಮುದ್ರಕ್ಕೆ ಹೋಗಿ ನವಿಲುಗೆರೆಯಿಂದ ಪೂಜೆ ಮಾಡ್ತಾರೆ. ಕೆಲವು ರಾಜ್ಯದಲ್ಲಿ ಬಿಜೆಪಿಯವರು ಹೋದ್ರೆ ಹೊಡೆಯುತ್ತಾರೆ. ಮೀಜೊರಾಂ ಸೇರಿ ಕೆಲವು ರಾಜ್ಯಗಳಲ್ಲಿ ಬಿಜೆಪಿಯವರಿಗೆ ನೆಲೆಯೇ ಇಲ್ಲ ಎಂದು ಕುಟುಕಿದ್ದಾರೆ.
ಆಗ ನಾನು, ಈಗ ಸಂಗಣ್ಣರಿಗೆ ಮೋಸ ಮಾಡಿದ್ದಾರೆ
ಬಿಜೆಪಿಯವರು ಮೋಸ ಮಾಡುತ್ತಾರೆ. ಈ ಹಿಂದೆ ಕನಕಗಿರಿಯಿಂದ ಪಕ್ಷೇತರರಾದ ನನ್ನನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಆದರೆ, ಆಮೇಲೆ ಅನರ್ಹಗೊಳಿಸಿದರು. ಆಗ ನಾನು, ಈಗ ಸಂಗಣ್ಣರಿಗೆ ಮೋಸ ಮಾಡಿದ್ದಾರೆ. ಸಂಸದ ಸಂಗಣ್ಣ ಮೋದಿ ಮೋದಿ ಎಂದು ಹೊಗಳಿದರು. ಪಾಪ ಒಳ್ಳೆಯ ಮನುಷ್ಯ, ಅವರಿಗೆ ಟಿಕೆಟ್ ನೀಡದೇ ಮನೆಯಲ್ಲಿ ಕೂಡಿಸಿದ್ದಾರೆ. ಸಂಸದ ಕರಡಿ ಸಂಗಣ್ಣರಿಗೆ ಟಿಕೆಟ್ ಕೊಡದಿದ್ದಕ್ಕೆ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.