ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಿಗೆ ನಿದ್ರೆಗೆ ಜಾರಿದ ದೃಶ್ಯ ಕಂಡುಬಂದಿತು.
ಜೆಡಿಎಸ್ ತೊರೆದು ಹಲವು ಮುಖಂಡರು ಕಾಂಗ್ರೆಸ್ ಸೇರಿದರು. ಮಾಜಿ ಎಂಎಲ್ಸಿ ಮರಿತಿಬ್ಬೆಗೌಡ, ಹೆಚ್ಡಿಕೆ ಆಪ್ತ, ಮಾಜಿ ಎಂಲ್ಸಿ ಅಪ್ಪಾಜಿಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಮಾಜಿ ಶಾಸಕ ಎಂ. ಶ್ರೀನಿವಾಸ್ ಅಳಿಯ ಯೋಗೀಶ್ ಹಾಗೂ ಬಿಜೆಪಿಯ ಮಾಜಿ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್ ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ಡಿ.ಕೆ. ಶಿವಕುಮಾರ್ ಮಾತನಾಡಿ, ಹಳೇ ಮೈಸೂರು ಭಾಗಕ್ಕೆ ಇವತ್ತು ದೊಡ್ಡ ಸಂದೇಶ. ಮರಿತಿಬ್ಬೆಗೌಡ್ರು ಅತಿ ಹೆಚ್ಚು ಕ್ರಿಯಾಶೀಲ ನಾಯಕ. ಮಂಡ್ಯ ಮೈಸೂರು ಭಾಗದ ಜೆಡಿಎಸ್ಗೆ ಪಿಲ್ಲರ್ ಆಗಿದ್ದವರು. ಜೆಡಿಎಸ್ನ ಗೊಂದಲ ನೋಡಿ ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರಲು ಬಂದಿದ್ದಾರೆ ಎಂದು ಹೇಳಿದರು.
ಸ್ಟಾರ್ ಚಂದ್ರುಗೆ ಬೆಂಬಲ ನೀಡ ಬಂದಿದ್ದಾರೆ
ಮಾಜಿ ಶಾಸಕ ಎಂ. ಶ್ರೀನಿವಾಸ್ ಪಕ್ಷ ಸೇರುವುದಾಗಿ ಪತ್ರ ಬರೆದಿದ್ದಾರೆ. ತಗ್ಗಳ್ಳಿ ವೆಂಕಟೇಶ್ ಕೂಡ ಮಂಡ್ಯ ಜೆಡಿಎಸ್ಗೆ ಶಕ್ತಿಯಾಗಿದ್ದವರು. ಶ್ರೀನಿವಾಸ್ ಅಳಿಯ ಯೋಗೀಶ್ ಸಂಘಟನೆ ಚತುರ. ಮಾವ ಶ್ರೀನಿವಾಸ್ಗೆ ದೊಡ್ಡ ಶಕ್ತಿಯಾಗಿ ಬಂದವರು. ಇವರೆಲ್ಲರೂ ಸ್ಟಾರ್ ಚಂದ್ರುಗೆ ಬೆಂಬಲ ನೀಡುವ ಸಲುವಾಗಿ ಪಕ್ಷಕ್ಕೆ ಬಂದಿದ್ದಾರೆ, ಅವರೆಲ್ಲರಿಗೆ ಸ್ವಾಗತ ಎಂದು ತಿಳಿಸಿದರು.