ಶಿವಮೊಗ್ಗ : ಬಿಜೆಪಿ ಹೆಸರಿಲ್ಲದ ವೇಳೆ ಯಡಿಯೂರಪ್ಪ ಅವರು ಕಷ್ಟಪಟ್ಟು ಬಿಜೆಪಿ ಬೆಳೆಸಿದ್ದಾರೆ ಎಂದು ಬಿಎಸ್ವೈರನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು.
ಶಿವಮೊಗ್ಗದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಶಕ್ತಿ ಸ್ವರೂಪಿಣಿ ಸಿಗಂದೂರು ಚೌಡೇಶ್ವರಿ ದೇವಿಯ ಚರಣಗಳಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು ಎಂದರು. ಕರ್ನಾಟಕದ ರಾಜನೀತಿಯನ್ನು ರಾಜ್ಯದ ಜನರು ಎಂದಿಗೂ ಸಕ್ಸಸ್ ಆಗಲು ಬಿಡುವುದಿಲ್ಲ. ಮೇ 7ಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಯೋಜನೆಗಳನ್ನು ಮಣ್ಣಾಗಿಸಬೇಕು ಎಂದು ಕರೆ ನೀಡಿದರು.
ವಿಕಸಿತ್ ಭಾರತಕ್ಕೆ 400 ಸೀಟುಗಳು ಬೇಕೇ ಬೇಕು
ಭ್ರಷ್ಟಾಚಾರ ಹಾಗೂ ತುಷ್ಟೀಕರಣದಲ್ಲಿ I.N.D.I.A ಸಂಘಟನೆ ತೊಡಗಿದೆ. ನಾವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ. ಜೂನ್ 4ರಂದು ಬಿಜೆಪಿಯು 400 ಸೀಟು ಗೆಲ್ಲಲು ನಿಮ್ಮ ಸಹಕಾರ ಅಗತ್ಯ. ವಿಕಸಿತ್ ಭಾರತಕ್ಕೆ 400 ಸೀಟುಗಳು ಬೇಕೇ ಬೇಕು ಈ ಬಾರಿ ಎಂದ ಮೋದಿ, ಜನತೆ ಬಾಯಲ್ಲಿಯೂ ಈ ಬಾರಿ 400 ಸೀಟು ಎಂದು ಹೇಳಿಸಿದರು.
ಕಾಂಗ್ರೆಸ್ ಬಡವರನ್ನು ಬಡವರನ್ನಾಗಿಸಿಯೇ ಉಳಿಸಿದೆ
ಬಡವರನ್ನು ಕಾಂಗ್ರೆಸ್ ಬಡವರನ್ನಾಗಿಸಿಯೇ ಉಳಿಸಿದೆ. ಕಳೆದ 10 ವರ್ಷಗಳಿಂದ 25 ಕೋಟಿ ಜನರು ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ. ನಾವು ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆಯುಷ್ಮಾನ್ ಭಾರತ್ ಮೂಲಕ ಸಾವಿರಾರು ಜನರನ್ನು ಆರೈಕೆ ಮಾಡಿದ್ದೇವೆ. 40 ಲಕ್ಷ ಮಹಿಳೆಯರಿಗೆ ಗ್ಯಾಸ್ ನೀಡಿದ್ದೇವೆ. ಕರ್ನಾಟಕದಲ್ಲಿ 9 ಲಕ್ಷ ಜನರಿಗೆ ಸೂರು ನೀಡುವ ಕೆಲಸ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.