ಮಂಡ್ಯ : ದಾಖಲೆ ಇಲ್ಲದ ಬರೋಬ್ಬರಿ 1 ಕೋಟಿ ರೂ. ನಗದನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿ ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಕೊಂಗಬೋರನದೊಡ್ಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಕ್ರೇಟಾ ಕಾರಿನಲ್ಲಿ ಬಂಡಲ್ ಗಟ್ಟಲೆ ಹಣ ಸಾಗಿಸಲಾಗುತ್ತಿತ್ತು.
ಗಿರೀಶ್ ಎಂಬುವವರು ಬೆಂಗಳೂರಿನಿಂದ ಕ್ರೇಟಾ ಕಾರಿನಲ್ಲಿ ಕೆ.ಆರ್. ಪೇಟೆ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೊಂಗಬೋರನದೊಡ್ಡಿ ಗ್ರಾಮದ ಬಳಿ ಕಾರು ತಪಾಸಣೆ ಮಾಡಲಾಗಿದೆ. ಆಗ ಚೀಲದಲ್ಲಿ ತುಂಬಿದ್ದ ಕಂತೆಗಟ್ಟಲೆ ನಗದು ಸಿಕ್ಕಿದೆ.
ಈ ಬಗ್ಗೆ ಗಿರಿಶ್ ಅವರನ್ನ ಚುನಾವಣಾಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ, ಅವರು ಸೂಕ್ತ ಉತ್ತರ ಹಾಗೂ ದಾಖಲೆ ನೀಡಿಲ್ಲ. ಹೀಗಾಗಿ, 99.20 ಲಕ್ಷ ರೂ. ಹಣ, ಕ್ರೇಟಾ ಕಾರು (KA-54-M-4030 ನಂಬರಿನ ಕ್ರೇಟಾ ಕಾರು) ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಸೋಮಶೇಖರ್, ಮದ್ದೂರು ಪೊಲೀಸ್ ಠಾಣೆ ಇನ್ಸ್ಪೆಕ್ಸರ್ ಪ್ರಸಾದ್ ಹಾಗೂ ಚುನಾವಣಾಧಿಕಾರಿ ಲೋಕನಾಥ್ ಸ್ಥಳದಲ್ಲಿ ಇದ್ದರು. ಸದ್ಯ ಗಿರೀಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.