ಶಿವಮೊಗ್ಗ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬದಿಂದ ಆದ ಅನ್ಯಾಯ ಚುನಾವಣೆಯಲ್ಲಿ ನನ್ನ ಕೈ ಹಿಡಿಯುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು, ಈಡಿಗರು ಸೇರಿದಂತೆ ನಾವೆಲ್ಲ ಹಿಂದೂಗಳು ನನ್ನ ಜೊತೆ ಇರ್ತಿವಿ ಅಂದಿದ್ದಾರೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ನನ್ನ ಭೇಟಿಗೆ ಬಂದಿದ್ದರು. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿದರು. ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಪಕ್ಷ ಶುದ್ದೀಕರಣವಾಗಬೇಕು
ನನ್ನ ಮಗ ಕಾಂತೇಶ್ ಅವರಿಗೆ ಎಂಎಲ್ಸಿ ಮಾಡುವುದಾಗಿ ತಿಳಿಸಿದರು. ಇದು ಎಂಎಲ್ಎ , ಎಂಪಿ ಮಾಡುವ ವಿಚಾರವಲ್ಲ ಪಕ್ಷ ಶುದ್ದೀಕರಣವಾಗಬೇಕು. ರಾಜ್ಯದ ಅನೇಕ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ, ಅದು ಸರಿಯಾಗಬೇಕು. ಹಿಂದುತ್ವವಾದಿಗಳಿಗೆ ತುಳಿಯುತ್ತಿದ್ದಾರೆ, ಅದು ಸರಿಯಾಗಬೇಕು ಎಂದು ಹೇಳಿದರು.
ಕುಟುಂಬ ರಾಜಕಾರಣ ದೂರ ಆಗಬೇಕು
ಹಿಂದುತ್ವ ಉಳಿಸಬೇಕು, ಪಕ್ಷ ಉಳಿಸಬೇಕು, ಕುಟುಂಬ ರಾಜಕಾರಣ ದೂರ ಆಗಬೇಕು. ನರೇಂದ್ರ ಮೋದಿಯವರ ಆಶಯದಂತೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬದಲಾವಣೆ ಬರಬೇಕು. ನನ್ನ ಜೊತೆಗಿನ ಚರ್ಚೆಯನ್ನು ಬಿಜೆಪಿ ಹೈಕಮಾಂಡ್ ನಾಯಕರಿಗೆ ಅವರು ತಿಳಿಸುತ್ತಾರೆ. ಮೋದಿ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದರು. ನಾನು ಬರುವುದಿಲ್ಲ ಚುನಾವಣೆಯಲ್ಲಿ ಗೆದ್ದು, ಮೋದಿಗೆ ಬೆಂಬಲಿಸುವುದಾಗಿ ತಿಳಿಸಿದ್ದೇನೆ. ಮೋದಿಯನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾನು ಜೊತೆಗಿರುವುದಾಗಿ ತಿಳಿಸಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.