ಬೀದರ್ : ಜಿಲ್ಲೆಯ ಹಲವು ಭಾಗಗಳಲ್ಲಿ ಸಂಜೆ ಗುಡುಗು, ಬಿರುಗಾಳಿ ಹಾಗೂ ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮಾರ್ಚ್ ಪ್ರಾರಂಭದಿಂದಲೂ ಜಿಲ್ಲೆಯಲ್ಲಿ ಕೆಂಡದಂತಹ ಬಿಸಿಲಿತ್ತು. ಇದರಿಂದ ಬೀದರಿಗರು ಹೈರಾಣಾಗಿದ್ದರು. ಆದರೆ, ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದ ಭೂಮಿ ತಂಪಾಗಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಸಂಜೆ 4.30ರ ಸುಮಾರಿಗೆ ಏಕಾಏಕಿ ಜೋರು ಮಳೆಯಾಯಿತು. ಬೀದರ್, ಔರಾದ ಮತ್ತು ಕಮಲನಗರ ತಾಲ್ಲೂಕು ಸೇರಿಂದತೆ ಹಲವೆಡೆ ಉತ್ತಮ ಮಳೆಯಾಗಿದೆ.
ಔರಾದನ ಚಿಕ್ಲಿ ಗ್ರಾಮ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಪರಿಣಾಮ ಮನೆಯ ಮೇಲಿನ ತಗಡು, ಗಿಡಮರಗಳು ನೆಲಕ್ಕುರುಳಿವೆ. ಜನವಾಡ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ನೆಲಕ್ಕುರಿಳಿದೆ.
ಈ ಸುದ್ದಿ ಓದಿದ್ದೀರಾ? : 8 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ
ಸಿಡಿಲಿಗೆ ಹೊತ್ತಿ ಉರಿದ ಮರ
ಭಾಲ್ಕಿ ತಾಲೂಕಿನ ಕೋಸಂ ಗ್ರಾಮದಲ್ಲಿ ಸಿಡಿಲಿಗೆ ಮರವೊಂದು ಹೊತ್ತಿ ಉರಿದಿದೆ. ಜೈಶಂಕರ್ ಶ್ರೀರಾಮ್ ಎಂಬುವರ ಮನೆ ಹಿಂದೆ ಇದ್ದ ತೆಂಗಿನ ಮರ ಸಿಡಿಲಿಗೆ ಬಲಿಯಾಗಿದೆ. ಒಟ್ನಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.