Sunday, May 5, 2024

ಶೋಭಾಗೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ : BSY ವಿರುದ್ಧ ಈಶ್ವರಪ್ಪ ಕೆಂಡ

ಶಿವಮೊಗ್ಗ : ಶೋಭಾ ಕರಂದ್ಲಾಜೆ ಅವರಿಗೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಸಿ.ಟಿ. ರವಿಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ಎಂದು ಪ್ರಶ್ನಿಸಿದರು.

ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ನಾನು. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸುತ್ತಾರೆ. ನಾನು ಹೋರಾಟ ನಡೆಸುತ್ತಿರುವುದೇ ಬಿಜೆಪಿಯಲ್ಲಿನ ಬದಲಾವಣೆಗಾಗಿ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಗುಡುಗಿದರು.

ಈಶ್ವರಪ್ಪನವರ ಮನವೊಲಿಸುವ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಆಕ್ರೋಶದಿಂದ ಬಂಡಾಯ ಸ್ಪರ್ಧೆ ಮಾಡುತ್ತಾರೆ ಎಂಬ ನಂಬಿಕೆ ಬಿಜೆಪಿಯವರಲ್ಲಿ ಇಲ್ಲ. ನಾನು ಆಕ್ರೋಶದಿಂದ ಮಾತನಾಡುತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಕುಟುಂಬದ ವ್ಯವಸ್ಥೆಯ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹರಿಹಾಯ್ದರು.

ಯತ್ನಾಳ್ ಬಗ್ಗೆ ಯಾಕೆ ಹಠ ಹಿಡಿಯಲಿಲ್ಲ?

ಯಡಿಯೂರಪ್ಪ ಆರು ತಿಂಗಳು ಹಠ ಹಿಡಿದು ತಮ್ಮ ಮಗ ಬಿ.ವೈ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದರು. ವಿಜಯೇಂದ್ರ ಲಿಂಗಾಯತ ಎಂದು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರಾ? ಪಂಚಮಸಾಲಿ ಲಿಂಗಾಯತ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಯಾಕೆ ಹಠ ಹಿಡಿಯಲಿಲ್ಲ? ಒಕ್ಕಲಿಗ ಸಮುದಾಯದ ಸಿ.ಟಿ. ರವಿಯನ್ನು ಯಾಕೆ ಮಾಡಲಿಲ್ಲ? ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES