Sunday, April 28, 2024

ಕಾಂಗ್ರೆಸ್​ನಲ್ಲಿ ಒಕ್ಕಲಿಗರಿಲ್ವಾ, ನಾವ್ಯಾರು ಒಕ್ಕಲಿಗರಲ್ವಾ? : HDK ವಿರುದ್ಧ ಚಲುವರಾಯಸ್ವಾಮಿ ಕಿಡಿ

ಮಂಡ್ಯ : ಕಾಂಗ್ರೆಸ್ ಒಕ್ಕಲಿಗರ ನಾಯಕತ್ವ ತುಳಿಯುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಲ್ವಾ? ನಾವ್ಯಾರು ಒಕ್ಕಲಿಗರಲ್ವಾ? ಎಂದು ತಿರುಗೇಟು ನೀಡಿದರು.

ಜಾತಿ ರಾಜಕಾರಣವನ್ನ ಜನ ಈಗ ಒಪ್ಪಲ್ಲ. ಅವರ ಚಿಹ್ನೆ, ಪಕ್ಷದ ಮೇಲೆ ಅವರಿಗೆ ವಿಶ್ವಾಸ ಇಲ್ಲ. ಅದಕ್ಕೆ ಡಾ.‌ಮಂಜುನಾಥ್ ಅವ್ರನ್ನ ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ. ರಾಜಕೀಯವಾಗಿ ಯಾರು ಯಾರನ್ನ ತುಳಿದರು ಎಂಬ ಇತಿಹಾಸ ಇದೆ. ಈಗ ನಾನು ಯಾಕೆ ಮಾತನಾಡುವುದು. ಜನಕ್ಕೆ ಅದೆಲ್ಲಾ ತಿಳಿದಿದೆ, ನಮ್ಮ ಪರ ಇದ್ದಾರೆ ಎಂದು ಕುಟುಕಿದರು.

ಮಲಗಿದ್ರು, ಎದ್ರು ನನ್ನದೇ ಜಪ ಮಾಡ್ತಿದ್ದಾರೆ

ಹೊಟ್ಟೆ ನೋವು ತಡೆಯಲಾರದೆ ಏನೇನೋ ಮಾತನಾಡುತ್ತಾರೆ. ಅದಕ್ಕೆ ವೈದ್ಯರೆ ಮೆಡಿಷನ್ ಕೊಡಬೇಕು. ಜನರು ನಮ್ಮನ್ನ ನಂಬಬೇಕು. ಜನ ಅವರನ್ನ ನಂಬಲಿಲ್ಲ, ನಮ್ಮ ಗ್ಯಾರಂಟಿ ನಂಬಿದರು. ಅವರ ಆಡಳಿತವನ್ನ ಜನ ಒಪ್ಪಲಿಲ್ಲ. ಮಲಗಿದ್ರು, ಎದ್ರು ಚಲುವರಾಯಸ್ವಾಮಿ ಜಪ ಮಾಡ್ತಿದ್ದಾರೆ. ಸುರೇಶ್ ಗೌಡನ ಬಗ್ಗೆ ಮಾತಾಡಲ್ಲ, ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಚಾಟಿ ಬೀಸಿದರು.

ಬಿಜೆಪಿ ಹಾಗೂ ಜೆಡಿಎಸ್ ಹೊಡೆದ ಮಡಿಕೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥ ಆಗಿದ್ದೆ. ನಾನು ಯಾರಿಗೂ ಚುನಾವಣೆ ಮಾಡಲಿಲ್ಲ. ಆಗ ಮೈತ್ರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಲಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏನು ಮಾಡಲು ಆಗಲಿಲ್ಲ. ಈಗಲೂ ಜೆಡಿಎಸ್‌ ಬಿಜೆಪಿ ಮೈತ್ರಿ ಈ ಭಾಗದಲ್ಲಿ ಜನ ಒಪ್ಪಲ್ಲ. ಎದುರಾಳಿ ನೋಡಿ ನಾವು ಚುನಾವಣೆ ಮಾಡಲ್ಲ. ಯಾರೇ ಅಭ್ಯರ್ಥಿ ಆದರೂ ನಾವು ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಜನರ ಮೇಲೆ ನಂಬಿಕೆ ಇದೆ. ಬಿಜೆಪಿ ಹಾಗೂ ಜೆಡಿಎಸ್ ಹೊಡೆದ ಮಡಿಕೆಯಾಗಿದೆ. ಮೈತ್ರಿ ಧಿಕ್ಕರಿಸಿ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES