ರಾಮನಗರ : ಜೆಡಿಎಸ್ ಪಕ್ಷ ಎಲ್ಲಿದೆ..? ಜೆಡಿಎಸ್ ಅವನತಿಯತ್ತ ಸಾಗುತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಿಟ್ಟು ಬಿಜೆಪಿ ಚಿಹ್ನೆಯಿಂದ ಡಾ.ಮಂಜುನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಕ್ಕೆ ಲೇವಡಿ ಮಾಡಿದರು.
ಇರುವ 19 ಜನ ಶಾಸಕರಲ್ಲಿ 10ರಲ್ಲಿ 12 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಸಿದ್ಧಾಂತ ಇಲ್ಲ. ಹಾಗಾಗಿ, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. 10ಕ್ಕೂ ಹೆಚ್ಚು ಶಾಸಕರು ಚುನಾವಣೆಗೂ ಮುಂಚೆಯೇ ನಮ್ಮ ಪಕ್ಷಕ್ಕೆ ಬರ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಕುಮಾರಸ್ವಾಮಿ ಅವ್ರೇ ನೀವು ಕಿರಾತಕರು
ಇದೇ ವೇಳೆ ಕಿರಾತಕರನ್ನ ಸೋಲಿಸಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ನಿಮ್ಮನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದಾಗ ಅವರು ಕಿರಾತಕರಾಗಿರಲಿಲ್ವಾ..? ಒಬ್ಬ ಮುಸ್ಲಿಂ ವ್ಯಕ್ತಿಯಲ್ಲಿ ಗೆಲ್ಲಿಸಿದಕ್ಕೆ ಅವರು ಕಿರಾತಕರಾದ್ರಾ..? ಆ ಪದ ನಿಮಗೆ ಅನ್ವಯಿಸುತ್ತದೆ, ನೀವು ಕಿರಾತಕರು. ಕುಮಾರಸ್ವಾಮಿ ಸೋಲಿನ ಹತಾಶೆಯಲ್ಲಿ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಜನಕ್ಕೆ ಹಬ್ಬ-ಹುಣ್ಣಿಮೆಗೆ ಗಿಫ್ಟ್ ಕೊಡ್ತೇವೆ
ಕಾಂಗ್ರೆಸ್ನಿಂದ ಸೀರೆ, ಕುಕ್ಕರ್ ಹಂಚಿಕೆ ಬಗ್ಗೆ ಸಿಪಿವೈ ವ್ಯಂಗ್ಯ ವಿಚಾರವಾಗಿ ಮಾತನಾಡಿ, ಹಬ್ಬ, ಹುಣ್ಣಮೆಗೆ ಗಿಫ್ಟ್ ಕೊಡೊದು ಸಾಮಾನ್ಯ. ಗಿಫ್ಟ್ ಕೊಡುವಷ್ಟು ಶಕ್ತಿ ನಮಗಿದೆ. ಎಲ್ಲಾ ವರ್ಗದ ಬಡಜನರಿಗೆ ಕೈಲಾದ ಸಹಾಯ ಮಾಡ್ತೇವೆ. ನಿಮಗೆ ಶಕ್ತಿ ಇದ್ದರೆ ನೀವೂ ಕೊಡಿ. ನಾವು ಇಲ್ಲೇ ಹುಟ್ಟಿ ಬೆಳೆದಿರುವವರು. ನಮ್ಮ ಜನಕ್ಕೆ ಹಬ್ಬ ಹುಣ್ಣಿಮೆಗೆ ಗಿಫ್ಟ್ ಕೊಡ್ತೇವೆ ಎಂದು ಗಿಫ್ಟ್ ಹಂಚುವುದನ್ನ ಇಕ್ಬಾಲ್ ಹುಸೇನ್ ಸಮರ್ಥನೆ ಮಾಡಿಕೊಂಡರು.