ಚಿಕ್ಕಬಳ್ಳಾಪುರ : ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಾಯಿಗೆ ಹೋಲಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು, ಆನೆ ನಡೆಯುವಾಗ ನಾಯಿ ಬೊಗಳುತ್ತೆ ಅಲ್ವಾ..? ಆ ಥರದ ಕತೆಯಲ್ಲಿ ಸಿಎಂ ಸಿದ್ಧರಾಮಯ್ಯ ಆನೆ. ಅನಂತಕುಮಾರ್ ಆ ಪ್ರಾಣಿ.. ಎಂದು ನಾಯಿ ಹೆಸರು ಹೇಳದೇ ಟೀಕಿಸಿದರು.
ಅನಂತ ಕುಮಾರ್ ಹೆಗಡೆ, ಅವರ ಅಪ್ಪ, ಅವರ ತಾತ, ಅವರ ವಂಶಸ್ಥರು ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಬಾಬಾ ಸಾಹೇಬರ ಸಂವಿಧಾನ ಬದಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ 400 ಸೀಟು ಬಂದರೆ ಅಲ್ವಾ? ಎಂದು ಬಹುಮತ ಬಂದರೆ ಸಂವಿಧಾನ ಬದಲಿಕೆ ಸಾಧ್ಯ ಎಂದ ಅನಂತಕುಮಾರ್ ಹೆಗಡೆಗೆ ತಿರುಗೇಟು ನೀಡಿದರು.
ನಾನೇನು ಅಂತ ಚಿಕ್ಕಬಳ್ಳಾಪುರ ಜನತೆಗೆ ಗೊತ್ತು
ಇದೇ ವೇಳೆ ಮಾಜಿ ಸಚಿವ ಡಾ.ಕೆ. ಸುಧಾಕರ್ ಹೇಳಿಕೆಗೂ ತಿರುಗೇಟು ನೀಡಿದರು. ನನ್ನ ದಾನ, ಧರ್ಮದ ಬಗ್ಗೆ ಸುಧಾಕರ್ ಮಾತನಾಡಿದ್ದಾರೆ. ನಾನೇನು ಅಂತ ಚಿಕ್ಕಬಳ್ಳಾಪುರ ಜನತೆಗೆ ಗೊತ್ತು. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೋಟಿವೆಷನ್, ಸಾವಿರಾರು ವಿದ್ಯಾರ್ಥಿಗಳಿಗೆ ಬಟ್ಟೆ, ವಿದ್ಯಾಭ್ಯಾಸ, ಚಿಕ್ಕಬಳ್ಳಾಪುರ ಕ್ಷೇತ್ರದ 70 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಅರಿಶಿನ ಕುಂಕುಮ, ಅನಾಥ ಮಕ್ಕಳಿಗೆ ನೆರವು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದೇನೆ ಎಂದರು.
ನಾನು ಕೇರ್ ಮಾಡೋ ಅವಶ್ಯಕತೆ ಇಲ್ಲ
ಅವರ ಕೆಲಸ ನೋಡಿಯೇ ಪೆರೇಸಂದ್ರದ ಸ್ವಗ್ರಾಮದಲ್ಲಿ ಅವರಿಗಿಂತ ನಂಗೆ ಹೆಚ್ಚು ಮತಗಳು ಬಂದಿವೆ. ಸೋತು ಸೊರಗಿ ಹತಾಶರಾಗಿರುವ ಮಾಜಿ ಸುಧಾಕರ್ ಏನೇನೋ ಮಾತಾಡ್ತಿದ್ದಾರೆ. ಅದಕ್ಕೆ ನಾನು ಕೇರ್ ಮಾಡೋ ಅವಶ್ಯಕತೆ ಇಲ್ಲ ಎಂದು ಪ್ರದೀಪ್ ಈಶ್ವರ್ ವಾಗ್ದಳಿ ನಡೆಸಿದರು.