ಶಿವಮೊಗ್ಗ : ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹೆಸರಿನಿಂದ ಬಿಜೆಪಿಯವರು ಗೆದ್ದಿದ್ದರು. ಆದರೆ, ಈ ಬಾರಿ ಆ ಹೆಸರು ಓಡಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಹೆಸರಿನಲ್ಲಿ ಮತ್ತೆ ಚುನಾವಣೆ ಗೆಲ್ಲುವ ಕನಸು ಬಿಜೆಪಿಯವರು ಕಾಣುತ್ತಿದ್ದಾರೆ. ಆ ಕನಸು ಈ ಬಾರಿ ನಡೆಯಲ್ಲ ಎಂದು ಕುಟುಕಿದರು.
ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಈ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಮಾಡುತ್ತೇವೆ. ಸರ್ವೆಗಳು ಭವಿಷ್ಯ ಹೇಳುತ್ತಿವೆ. ಆದರೆ, ಆ ಸರ್ವೆಗಳು ಈ ಬಾರಿ ತಲೆಕೆಳಗಾಗುತ್ತವೆ. ರಾಜ್ಯದ ಜನರು ನಮ್ಮ ಪರವಾಗಿದ್ದಾರೆ. ಸಮೀಕ್ಷೆ ಮೀರಿ ನಾವು ಫಲಿತಾಂಶ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಹೆಸರು ನಡೆಯುವುದಿಲ್ಲ
ಜನರಿಗೆ ಭಾವನಾತ್ಮಕ ಮಾತುಗಳು ಬೇಡವಾಗಿದೆ. ಜನರ ಹೊಟ್ಟೆ ಹಸಿವಿಗೆ ಗ್ಯಾರಂಟಿ ಯೋಜನೆ ಮೂಲಕ ಕಾರ್ಯಕ್ರಮ ಬೇಕಾಗಿದೆ. ನಾವು ಉಚಿತ ಗ್ಯಾರಂಟಿ ಮೂಲಕ ಚುನಾವಣೆಗೆ ಹೋಗುತ್ತಿದ್ದೇವೆ. ಈ ಚುನಾವಣೆಯಲ್ಲಿ ಮೋದಿ ಹೆಸರು ನಡೆಯುವುದಿಲ್ಲ ಎಂದು ಚಾಟಿ ಬೀಸಿದರು.
ಜೆಡಿಎಸ್ ಹಣೆಬರಹ ಬದಲಾಗಲ್ಲ
ಬಿಜೆಪಿ ಹಾಗೂ ಜೆಡಿಎಸ ಮೈತ್ರಿ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಹಣೆಬರಹ ಏನು ಎಂಬುದು ಅವರೇ ಸಾಬೀತು ಮಾಡಿದ್ದಾರೆ. ಜೆಡಿಎಸ್ ಬಿಜೆಪಿ ‘ಬಿ’ ಟೀಂ ಎನ್ನುತ್ತಿದ್ದರು. ಈಗ ಅವರೇ ಬಿಜೆಪಿ ಜೊತೆ ಮೈತ್ರಿ ಆಗಿದ್ದಾರೆ. ಇದೇ ಮೈತ್ರಿ ಬಿಜೆಪಿ ಹಾಗೂ ಜೆಡಿಎಸ್ ಸೋಲಿಗೆ ಮುಳುವಾಗುತ್ತಿದೆ ಎಂದು ಮಧು ಬಂಗಾರಪ್ಪ ಕುಹಕವಾಡಿದರು.