ಶಿವಮೊಗ್ಗ : ದೇಶದ ಟಾಪ್ 10 ಸಂಸದರ ಪೈಕಿ ಬಿ.ವೈ. ರಾಘವೇಂದ್ರ ಅವರೂ ಒಬ್ಬರಾಗಿದ್ದಾರೆ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಸಂಸದ ಬಿ.ವೈ. ರಾಘವೇಂದ್ರ ಸಹ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಪುರಸಭೆಯ ಅಧ್ಯಕ್ಷರಾಗಿದ್ದಾಗ ಹಲ್ಲೆಗೊಳಗಾಗಿ ಪುನರ್ಜನ್ಮ ಪಡೆದಿದ್ದರು. ಇದಾದ ಬಳಿಕ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದರು. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಸಿಟ್ಟು ತೋರಿಸಿದ್ದಾರೆ. ವೈಯಕ್ತಿಕ ವಿಷಯದಲ್ಲಿ ಅಲ್ಲ. 45 ವರ್ಷ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ. ಆದರೆ, ಯಡಿಯೂರಪ್ಪ ನೇತೃತ್ವದಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕ, ಚೀನಾದ ಎಚ್ಚರಿಕೆಯನ್ನು ಲೆಕ್ಕಿಸಲ್ಲ
ಕೇಂದ್ರ ಸರ್ಕಾರ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದೆ. ಇದರಿಂದಾಗಿ ಭಾರತ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. 2014ಕ್ಕೆ ವಿಶ್ವದ ದುರ್ಬಲ ದೇಶಗಳ ಪಟ್ಟಿಯಲ್ಲಿತ್ತು. ಆದರೆ, ಈಗ ಆ ಚಿತ್ರಣ ಬದಲಾಗಿದೆ. ಇಂಗ್ಲೆಂಡ್ ನ್ನು ಹಿಂದಕ್ಕೆ ತಳ್ಳಿ ಭಾರತ ಶಕ್ತಿಯುತವಾಗಿ ಮುನ್ನುಗ್ಗುತ್ತಿದೆ. ಮೋದಿಯವರ ಮೂರನೇ ಆಡಳಿತದಲ್ಲಿ ಭಾರತ ವಿಶ್ವದ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಅಮೆರಿಕ, ಚೀನಾದ ಎಚ್ಚರಿಕೆಯನ್ನು ಲೆಕ್ಕಿಸದೆ ಭಾರತ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.