ತುಮಕೂರು : ದೇವೇಗೌಡ್ರು ಮನೆಗೆ ಎಲ್ಲಾ ಪಾರ್ಟಿ ನಾಯಕರು ಬರುತ್ತಿದ್ದರು. ಜೆಡಿಎಸ್ ನಾಯಕರುಗಳು, ಕುಟುಂಬದವರು ಇದೀಗ ಬೇರೆಯವರ ಮನೆ ಹತ್ತಿರ ಹೋಗುವ ರೀತಿ ಆಗಿದೆ. ಅದೊಂದೆ ನನಗೆ ನೋವು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬೇಸರಿಸಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನೋವಾಗುತ್ತಿರುವುದು ಏನೆಂದರೆ, ದೇವೇಗೌಡ್ರು ರಾಷ್ಟ್ರ ಆಡಳಿತ ಮಾಡಿರುವಂತ ನಾಯಕ. ಅವರ ಮನೆಯವರು ಬೇರೆಯವರ ಮನೆ ಬಳಿ ಹೋಗುತ್ತಿದ್ದಾರೆ ಎಂದು ಕುಟುಕಿದರು.
ಮಂಡ್ಯ ಲೋಕಸಭಾ ಜೆಡಿಎಸ್ ಟಿಕೆಟ್ ವಿಚಾರವಾಗಿ ಮಾತನಾಡಿ, ಅವರು ಯಾರನ್ನಾದರೂ ನಿಲ್ಲಿಸಿಕೊಳ್ಳಲಿ. ಅವರ ಪಾರ್ಟಿ ಅವರ ಅಭ್ಯರ್ಥಿ. ಮಂಡ್ಯದಲ್ಲಿ ನಾವು ಈಗಾಗಲೇ ಚುನಾವಣೆ ಪ್ರಾರಂಭ ಮಾಡಿದ್ದೇವೆ. ಗೆಲ್ಲೋಕೆ ತಾನೇ ನಾವು ಚುನಾವಣೆ ಮಾಡುತ್ತಿರುವುದು. ಚುನಾವಣೆ ಗೆಲ್ಲಬೇಕು ಅಂತಾನೆ ಜನ ಹೋಗುತ್ತಿರುವುದು ಎಂದು ಹೇಳಿದರು.
20ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ
ಎಂಟು ತಿಂಗಳಿಂದ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಐದು ಉಚಿತ ಗ್ಯಾರಂಟಿ ಕೊಟ್ಟಿದ್ದೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
8 ಗಂಟೆಗೆ ಸಿಎಂ ಸಿಎಲ್ಪಿ ಸಭೆ ಕರೆದಿದ್ದಾರೆ
ಸಿಎಂ ಸಿದ್ದರಾಮಯ್ಯ ಸಿಎಲ್ಪಿ ಮೀಟಿಂಗ್ ಬಗ್ಗೆ ಮಾತನಾಡಿದ ಅವರು, ನಾನು 6 ಗಂಟೆಗೆ ಹೋಗುತ್ತಿದ್ದೇನೆ. ರಾತ್ರಿ 8 ಗಂಟೆಗೆ ಸಭೆ ಕರೆದಿದ್ದಾರೆ. 5 ಅಥವಾ 6 ಗಂಟೆಗೆ ಹೋಗುತ್ತೇನೆ ಎಂದು ಚಲುವರಾಯಸ್ವಾಮಿ ಹೇಳಿದರು.