ಬೀದರ್ : ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಅನವಶ್ಯಕವಾಗಿ ನನ್ನ ಹೆಸರನ್ನು ತರುತ್ತಿದ್ದಾರೆ ಎಂದು ಎಂಎಲ್ಸಿ ಅರವಿಂದ ಅರಳಿ ವಿರುದ್ದ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬೀದರ್ನಲ್ಲಿ ಮಾತನಾಡಿದ ಅವರು, ಎಂಎಲ್ಸಿ ಅರವಿಂದಕುಮಾರ್ ಅರಳಿ, ತಮ್ಮ ಅಧಿಕಾರಿವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ. ಸದನದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಾಬು ವಾಲಿ ಬುಡಾದಲ್ಲಿ ಲೂಟಿ ಹೊಡೆದಿದ್ದಾರೆ ಅಂತ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಈವರೆಗೆ ಬುಡಾದಲ್ಲಿ ಯಾರು ಯಾರು ಬುಡಾ ಅಧ್ಯಕ್ಷರಾಗಿದ್ದಾರೆ. ಅವರ ಸಮಯದಲ್ಲಿ ಆಗಿರುವ ಎಲ್ಲಾ ಕಾರ್ಯಗಳ ಕುರಿತು ತನಿಖೆ ಆಗಲಿ. ಎಲ್ಲರದ್ದೂ ತನಿಖೆ ಆದರೆ ಆಗ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅರವಿಂದ ಅರಳಿ ಹಾಗೂ ಸರಕಾರಿ ಅಧಿಕಾರಿ ಆಗಿರುವ ಅವರ ಸಹೋದರ ಮಕ್ಕಳ ಹೆಸರಲ್ಲಿ, ಜಿಮ್ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ದಾಖಲೆ ಸಮೇತ ದೂರು ನೀಡ್ತೇನೆ. ಅರಳಿ ಅವರ ಇಡಿ ಕುಟುಂಬವನ್ನ ಜೈಲಿಗೆ ಕಳಿಸ್ತೇನೆ ಎಂದು ಕಿಡಿಕಾರಿದರು.
ಅರಳಿ ಭ್ರಷ್ಟಾಚಾರದ ತಂದೆ-ತಾಯಿ
ಅರಳಿ ಅಂತವರಿಂದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕ್ಲೀನ್ ಆ್ಯಂಡ್ ಡೈನಾಮಿಕ್ ನಾಯಕರಿದ್ದಾರೆ. ಅರಳಿ ಅಂತವರನ್ನ ಬೆನ್ನಿಗೆ ಕರೆದುಕೊಂಡು ತಿರುಗಬಾರದು. ಅರವಿಂದಕುಮಾರ್ ಅರಳಿ ಭ್ರಷ್ಟಾಚಾರದ ತಂದೆ-ತಾಯಿ ಆಗಿದ್ದಾರೆ. ಅರಳಿಯಿಂದ ಬೀದರ್ಗೆ ಮುಕ್ತಿ ನೀಡಬೇಕಿದೆ ಎಂದು ಏಕವಚನದಲ್ಲೇ ಹರಿಹಾಯ್ದರು.