Tuesday, May 7, 2024

ಅಯೋಧ್ಯೆಯಲ್ಲೇ ವಾಸ.. ಶ್ರೀರಾಮ ಸನ್ನಿಧಿಯಲ್ಲಿ ಬಿಗ್ ಬಿ ಅಮಿತಾಭ್ ನಿವಾಸ

ಬೆಂಗಳೂರು : ಅಯೋಧ್ಯೆಯಲ್ಲಿ ಉದ್ಘಾಟನೆ ಆಗಲಿರೋ ರಾಮಮಂದಿರ ಇಡೀ ವಿಶ್ವದ ಗಮನ ಸೆಳೆದಿದೆ. ಪ್ರಭು ಶ್ರೀರಾಮ ನೆಲೆಸಿರೋ ಅಯೋಧ್ಯೆಯಲ್ಲಿ ತಾವು ವಾಸ ಮಾಡಬೇಕು ಅಂತ ಸಿನಿಲೋಕದ ದಿಗ್ಗಜ ಅಮಿತಾಭ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ರಾಮಮಂದಿರದ ಬಳಿಯೇ ಜಾಗವನ್ನ ಖರೀದಿಸಿ ಮನೆ ಕಟ್ತಾ ಇದ್ದಾರೆ.

ಹೌದು, ಇಡೀ ದೇಶ ಸದ್ಯ ರಾಮಜಪ ಮಾಡ್ತಾ ಇದೆ. ಜನವರಿ 22ಕ್ಕೆ ಶ್ರೀರಾಮ ಅಯೋಧ್ಯೆಯಲ್ಲಿ ವಿರಾಜಮಾನ ಆಗಲಿದ್ದಾನೆ. ರಾಮ ನೆಲೆಗೊಳ್ಳುವ ಅಯೋಧ್ಯೆಯಲ್ಲಿ ಬಹಳಷ್ಟು ಜನ ಜಾಗ ಖರೀದಿ ಮಾಡತೊಡಗಿದ್ದಾರೆ. ಅಂಥವರಲ್ಲಿ ಅಮಿತಾಭ್ ಬಚ್ಚನ್ ಒಬ್ಬರು.

ಅಮಿತಾಭ್ ಎಂಥಾ ದೈವ ಭಕ್ತ ಅನ್ನೋದು ಗೊತ್ತೇ ಇದೆ. ತಮ್ಮ ಯಶಸ್ಸಿಗೆ ದೈವ ಬಲವೇ ಕಾರಣ ಅಂತ ನಂಬುವ ಅಮಿತಾಭ್ ದೇಶದ ಪ್ರಮುಖ ದೇಗುಲಗಳಿಗೆ ಆಗಾಗ ಭೇಟಿ ಕೊಡ್ತಾನೆ ಇರ್ತಾರೆ. ಇಂಥಾ ಅಮಿತಾಭ್​ಗೆ ಅಯೋಧ್ಯೆಯಲ್ಲಿ ನಡೆಯೋ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ಕೂಡ ಬಂದಿದೆ. ಈ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಅಮಿತಾಭ್ ಕಾತುರದಿಂದ ಕಾಯ್ತಾ ಇದ್ದಾರೆ. ಜಸ್ಟ್ ಉದ್ಘಾಟನೆಯಲ್ಲಿ ಭಾಗಿಯಾಗೋದಷ್ಟೇ ಅಲ್ಲ, ಅಮಿತಾಭ್ ಶೀಘ್ರದಲ್ಲಿ ಅಯೋಧ್ಯೆಯಲ್ಲೇ ವಾಸ ಮಾಡ್ಲಿಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಅಯೋಧ್ಯೆಯ ಪವಿತ್ರ ಸರಯೂ ನದಿಯ ದಂಡೆಯ ಮೇಲಿರುವ ‘ಎನ್​ಕ್ಲೇವ್​ ದಿ ಸರಯು’ನಲ್ಲಿ ಅಮಿತಾಭ್ ಸೈಟ್ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ರಿಂದ ಖರೀದಿಸಿರುವ ಈ ನಿವೇಶನದ ಮೌಲ್ಯ 14.5 ಕೋಟಿ ರೂಪಾಯಿ ಅಂತ ಹೇಳಲಾಗ್ತಾ ಇದೆ.

ಅಮಿತಾಭ್ ಬಚ್ಚನ್ ಈ ನಿವೇಶನದಲ್ಲಿ ಸುಮಾರು 10,000 ಚದರ ಅಡಿ ಅಳತೆಯ ಮನೆಯನ್ನು ನಿರ್ಮಿಸೋದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇಲ್ಲಿಯೇ ಬಂದು ಸೆಟಲ್ ಆಗೋ ಐಡಿಯಾ ಕೂಡ ಬಿಗ್ ಬಿಗೆ ಇದೆಯಂತೆ. ಅಮಿತಾಭ್​ರ ಮುಂಬೈನಲ್ಲಿರೋ ಜಲ್ಸಾ ಬಂಗಲೆಯ ವ್ಯಾಲ್ಯೂನೇ 100ರಿಂದ 120 ಕೋಟಿ. ಇದನ್ನೂ ಬಿಟ್ಟೂ ಅಮಿತಾಭ್ ಬಳಿ ಕೋಟಿ ಕೋಟಿ ಬೆಲೆ ಬಾಳೋ ಬಂಗಲೆಗಳಿವೆ. ಅವನ್ನೆಲ್ಲಾ ಬಿಟ್ಟು ಅಮಿತಾಭ್ ಅಯೋಧ್ಯೆಗೇಕೆ ಹೊರಟು ನಿಂತಿದ್ದಾರೆ ಅಂತೀರಾ ಅದಕ್ಕೆ ಖುದ್ದು ಅಮಿತಾಭ್ ಉತ್ತರ ಕೊಟ್ಟಿದ್ದಾರೆ.

ನಟ ಅಮಿತಾಭ್ ಹೇಳಿದ್ದೇನು?

‘ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಅಯೋಧ್ಯೆಯಲ್ಲಿ ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಎದುರು ನೋಡುತ್ತಿದ್ದೇನೆ. ಅಯೋಧ್ಯೆಯ ಕಾಲಾತೀತ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭೌಗೋಳಿಕ ಗಡಿಗಳನ್ನು ಮೀರಿದ ಭಾವನಾತ್ಮಕ ಸಂಬಂಧವನ್ನು ಬೆಸೆದಿದೆ. ಇದು ಅಯೋಧ್ಯೆಯ ಆತ್ಮಕ್ಕೆ ಹೃತ್ಪೂರ್ವಕ ಪ್ರಯಾಣದ ಪ್ರಾರಂಭವಾಗಿದೆ. ಅಲ್ಲಿ ಸಂಪ್ರದಾಯ ಮತ್ತು ಆಧುನಿಕತೆ ಎರಡೂ ಅಸ್ತಿತ್ವದಲ್ಲಿದೆ. ಜಾಗತಿಕ ಆಧ್ಯಾತ್ಮಿಕ ರಾಜಧಾನಿಯಲ್ಲಿ ನನ್ನ ಮನೆಯನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಅಮಿತಾಭ್ ಹೇಳಿದ್ದಾರೆ.

ರಾಮಮಂದಿರದಿಂದ 15 ನಿಮಿಷ ನಡಿಗೆ

ಬಿಗ್ ಬಿ ಖರಿದಿಸಿರೋ ಜಾಗ ರಾಮಮಂದಿರದಿಂದ 15 ನಿಮಿಷ ನಡಿಗೆಯ ದೂರದಲ್ಲಿದೆಯಂತೆ. ತಮ್ಮ ಕೊನೆಯ ಕಾಲದಲ್ಲಿ ಈ ರಾಮ ಸನ್ನಿಧಾನದಲ್ಲೇ ವಾಸ ಮಾಡಬೇಕು ಅಂತ ಬಿಗ್ ಬಿ ಯೋಚಿಸಿದ್ದಾರೆ. ಸದ್ಯದಲ್ಲೇ ಈ ನಿವೇಷನದಲ್ಲಿ ಬಿಗ್ ಬಿ ನಿವಾಸ ಎದ್ದು ನಿಲ್ಲಲಿದೆ. ರಾಮ ಸನ್ನಿಧಿಯಲ್ಲಿ ಅಮಿತಾಭ್ ವಾಸ ಆರಂಭವಾಗಲಿದೆ.

  • ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES