Wednesday, May 22, 2024

ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ ಪರಿಹಾರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಜಮ್ಮು ಕಾಶ್ಮೀರರ ರಜೌರಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್‌ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರು ತಲುಪಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ ನಮನ ಸಲ್ಲಿಸಿ ಬಳಿಕ ಮಾತನಾಡಿದ್ದಾರೆ.

ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಹುತಾತ್ಮರಾದ ಪ್ರಾಂಜಲ್ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮನೆಗೆ ಅವರೊಬ್ಬರೇ ಮಗ ಎಂಬುದು ತಿಳಿದು ಭಾರಿ ದುಃಖವಾಯಿತು. ಅಧಿಕಾರಿಗಳೊಂದಿಗೆ ಚರ್ಚಿಸಿ ಮೃತ ಯೋಧನ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಹುತಾತ್ಮ ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ. ರಾಷ್ಟ್ರರಕ್ಷಣೆಯಲ್ಲಿ ಪ್ರಾಂಜಲ್ ಅವರ ಅನನ್ಯ ಸೇವೆ, ಸಮರ್ಪಣೆಯನ್ನು ನಾಡು ಸದಾ ಸ್ಮರಿಸಲಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆತ್ತವರು ಆದರ್ಶ ತ್ಯಾಗಮಯಿಗಳು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲಾಯಿತು. ಸಂತೃಪ್ತ ಜೀವನ ನಡೆಸಲು ಹಾಗೂ ಇತರ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದುವ ವಿಫುಲ ಅವಕಾಶಗಳಿದ್ದಾಗ್ಯೂ ದೇಶ ರಕ್ಷಣೆಗೆ ತನ್ನ ಮೊದಲ ಆದ್ಯತೆ ನೀಡಿ ಪ್ರಾಂಜಲ್ ಪ್ರಾಣ ಸಮರ್ಪಿಸಿದ್ದಾರೆ. ಐತಿಹಾಸಿಕ ತ್ಯಾಗ ಹಾಗೂ ಯುವ ಸಮೂಹಕ್ಕೆ ರಾಷ್ಪ್ರ ಭಕ್ತಿ ಪ್ರೇರೇಪಿಸುವ ಶಾಶ್ವತ ಸಂದೇಶವಾಗಿದೆ. ಇದ್ದೊಬ್ಬ ಮಗನನ್ನೇ ಭಾರತಾಂಬೆಯ ಮಡಿಲಿಗೆ ಸಮರ್ಪಿಸಿದ ಪ್ರಾಂಜಲ್ ಅವರ ಹೆತ್ತವರು ಆದರ್ಶ ತ್ಯಾಗಮಯಿಗಳಾಗಿದ್ದು, ಅವರ ದುಃಖದಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES