ತುಮಕೂರು : ರಾಜ್ಯದ ಸಾಧುಸಂತರ ಹಾಗೂ ಜನರ ಆಶೀರ್ವಾದದಿಂದ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಪತರು ನಾಡಿಗೆ ಕನ್ನಡದಲ್ಲೇ ನಮಸ್ಕರಿಸಿದರು. ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿ, ಶ್ರೀ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಶ್ರೀಗಳನ್ನು ಸ್ಮರಿಸಿದರು.
ಇಲ್ಲಿ ಸೇರಿರುವ ಜನರನ್ನು ನೋಡಿದರೆ ಗೊತ್ತಾಗುತ್ತೆ, ಬಿಜೆಪಿ ಈ ಬಾರಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ. ಜೈ ಬಜರಂಗ ಬಲಿ ಕೀ ಜೈ ಎಂದು ಪ್ರಧಾನಿ ಮೋದಿ ಹೇಳಿದರು.
‘ಜೈ ಬಜರಂಗಬಲಿ‘ ಎಂದ್ರೆ ‘ಕೈ‘ಗೆ ಸಂಕಷ್ಟ
ರಾಷ್ಟ್ರಕವಿ ಕುವೆಂಪು ಅವರು ‘ಓ ಲಂಕಾ ಭಯಂಕರ ಸಮೀರಕುಮಾರ ಹೇ ಆಂಜನೇಯ’ ಎಂದು ತಮ್ಮ ಕವನವೊಂದರಲ್ಲಿ ಆಂಜನೇಯನನ್ನು ಕುರಿತ ಹಾಡಿ ಹೊಗಳಿದ್ದಾರೆ. ಆದರೆ, ಕಾಂಗ್ರೆಸ್ಸಿಗೆ ‘ಜೈ ಬಜರಂಗಬಲಿ’ ಎಂದು ಹೇಳಿದರೆ ಸಂಕಟವಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
5 ರೂ.ಗೆ ಯೂರಿಯಾ ನೀಡುತ್ತಿದ್ದೇವೆ
ಕಳೆದ 9 ವರ್ಷಗಳಲ್ಲಿ ಮಹಿಳೆಯರು, ರೈತರು, ಬಡವರು ಸೇರಿದಂತೆ ಎಲ್ಲರ ಅಭಿವೃದ್ಧಿ ಆಗಿದೆ. ಇದು ಕಳೆದ 70 ವರ್ಷಗಳಲ್ಲಿ ಆಗಿರಲಿಲ್ಲ. ರೈತರು ರಸಗೊಬ್ಬರಗಳಿಗೆ ಹೆಚ್ಚಿನ ಹಣ ಸಂದಾಯ ಮಾಡಬಾರದೆಂದು, ಯೂರಿಯಾ ಗೊಬ್ಬರವನ್ನು 50 ರೂಪಾಯಿಗೆ ಕೊಂಡು ರೈತರಿಗೆ 5 ರೂಪಾಯಿಯಲ್ಲಿ ನೀಡುತ್ತಿದ್ದೇವೆ ಎಂದು ಹೇಳಿದರು.
9 ಕೋಟಿ ಮನೆಗಳಿಗೆ ನೀರಿನ ಸಂಪರ್ಕ
ಹಿಂದಿನ ಸರ್ಕಾರದಲ್ಲಿ ಪ್ರತಿಯೊಂದು ಆಸ್ತಿಯು ಸಹ ತಂದೆ ಅಥವಾ ಮಕ್ಕಳ ಹೆಸರಲ್ಲಿರುತ್ತಿತ್ತು. ಮೋದಿ ಬಂದ ನಂತರ 3 ಕೋಟಿ ಸಹೋದರಿಯರ ಹೆಸರಲ್ಲಿ ಮನೆ ಮತ್ತು ಆಸ್ತಿ ನೋಂದಣಿಯಾಗಿದೆ. ಸೌಭಾಗ್ಯ ಯೋಜನೆಯಡಿ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 9 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಪಿಎಂ ಗ್ರಾಮ ಸಡಕ್ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ತುಮಕೂರು ಜಿಲ್ಲೆಯ 1.5 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕಲ್ಪಿಸಿದ್ದೇವೆ ಎಂದರು.
7 ಅಭಿವೃದ್ಧಿಯ ಸಂಕಲ್ಪ ಹೊಂದಿದೆ
ತುಮಕೂರಿನಲ್ಲಿ ಅನೇಕ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಈತ ಮತ್ತೆ ಪವಿತ್ರ ಭೂಮಿ ಸಿದ್ಧಗಂಗಾ ಶ್ರೀಗಳ ಸಾನಿಧ್ಯಕ್ಕೆ ಬಂದಿದ್ದೇನೆ. ಬಿಜೆಪಿ ಅನ್ನ, ಅಕ್ಷರ, ಆದಾಯ 7 ಅಭಿವೃದ್ಧಿಯ ಸಂಕಲ್ಪ ಹೊಂದಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ವೇಗದ ಗತಿ ನೀಡಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ‘ಕಲ್ಪತರು ನಾಡಿ’ನ ಕೊಬ್ಬರಿ ಬೆಳೆ ರೈತರ ಹಿತಕ್ಕಾಗಿ MSP ಹೆಚ್ಚು ಮಾಡಿದೆ ಎಂದು ಪ್ರಸ್ತಾಪಿಸಿದರು.
ಕಾಂಗ್ರೆಸ್ ಪಕ್ಷ ಕರ್ನಾಟಕದ ಮಕ್ಕಳ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದೆ. ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ತಡೆಯುತ್ತೇವೆ ಅಂತಾ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ವಿಶ್ವ ವಿದ್ಯಾನಿಲಯದ ಹೆಲಿಪ್ಯಾಡ್ನಿಂದ ಸಮಾವೇಶಕ್ಕೆ ತೆರಳುವ ದಾರಿಯುದ್ದಕ್ಕೂ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಹೋವಿನ ಮಳೆ ಸುರಿಸಿದರು.