Thursday, May 9, 2024

ಕೋಟೆನಾಡಿನಲ್ಲಿ ರಘು ಆಚಾರ್ ‘ಭರ್ಜರಿ ಮತ ಬೇಟೆ’

ಬೆಂಗಳೂರು : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಕೋಟೆನಾಡಿನಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.

ಇಂದು ಬಸವ ಜಯಂತಿ ಪ್ರಯುಕ್ತ ಬೆಳಗ್ಗೆ ತಮ್ಮ ಮನೆಯಲ್ಲಿ  ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಲಯಕ್ಕೆ ತೆರಳಿ ಸ್ವಾಮಿಯ ಆಶೀರ್ವಾದ ಪಡೆದರು.

ನಂತರ ಜೆಡಿಎಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ನ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷರಾದ ಜಯಣ್ಣ ಹಾಗೂ ನಿಕಟವೂರ್ವ ಅಧ್ಯಕ್ಷರಾಗಿದ್ದ ಡಿ.ಯಶೋಧರ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ನಂತರದಲ್ಲಿ ನಗರದ ಮಾರುಕಟ್ಟೆಗೆ ತೆರಳಿ ಮತಯಾಚನೆ ಮಾಡಿದರು.

ಒಳ್ಳೆಯ ವ್ಯಕ್ತಿಗೆ ಮತ ನೀಡಿ

ಈ ವೇಳೆ ಮಾತನಾಡಿದ ರಘು ಆಚಾರ್ ಅವರು, ದೇಶದಲ್ಲಿ ಇದ್ದಂತಹ  ಮಹಾನ್ ಕ್ರಾಂತಿ ಕಾರಿಗಳೆಂದರೆ ಇಬ್ಬರೇ  ಅದರಲ್ಲಿ ಒಬ್ಬರು ಬಸವಣ್ಣನವರು, ಮತ್ತೊಬ್ಬರು ಬಾಬಾ ಸಾಹೇಬ್ ಅಂಬೇಡ್ಕರರು ಮಾತ್ರ. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಕಟ್ಟಿ ನಾಡಿನ ಪ್ರತಿಯೊಂದು ಜಾತಿಗೂ ಸಾಮಾಜಿಕ ನ್ಯಾಯ ನೀಡಿದರು. ನಂತರ ಅದನ್ನು ಸಾಕಾರಗೊಳಿಸಿದವರು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಎಂದರು.

ಇದನ್ನು ಓದಿ : ಎಚ್​ಡಿಕೆ ​ಬದ್ಧತೆ : ಅನಾರೋಗ್ಯದ ನಡುವೆಯೂ ‘ಚುನಾವಣಾ ಪ್ಲ್ಯಾನ್’

ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ವಿರುದ್ಧ ನಡೆಯುವ ಮೂಲಕ ತೊಂದರೆಗೆ ಸಿಲುಕುತ್ತಿದ್ದಾರೆ. ಮತದಾರರು ನಿಮ್ಮ ಮತ ನಿಮ್ಮ ಭವಿಷ್ಯ ಎಂಬುದನ್ನು ಮರೆಯಬಾರದು. ಒಳ್ಳೆಯ ವ್ಯಕ್ತಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಮುಸ್ಲಿಂ ಮುಖಂಡರ ಬೆಂಬಲ

ಚಿತ್ರದುರ್ಗದ ವಾರ್ಡ್ ನಂ.10ರ ಮೆಹಬೂಬ್ ನಗರ 1ನೇ ಕ್ರಾಸ್ ಚೆಲಗುಡ್ಡ ದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಿದರು. ಮುಸ್ಲಿಂ ಧರ್ಮಗುರುಗಳಾದ ಸಯ್ಯದ್ ಜಾಬೀರ್ ತುಂಗಲ್, ಮುಸ್ಲಿಂ ಮುಖಂಡರಾದ ಸಾದಿಕ್ ಪಾಷ ಹಾಗೂ ಕಾರ್ಯಕರ್ತರು ಮತ್ತು ಬೆಂಬಲಿಗರು ರಘು ಆಚಾರ್ ಜೊತೆ ಹೆಜ್ಜೆಹಾಕಿದರು. ಇದೇ ವೇಳೆ ಈ ಭಾಗದ ಮೂಲಭೂತ ಬೇಡಿಕೆಗಳಾದ ಮನೆಗಳು, ಆಸ್ಪತ್ರೆ, ಶಾಲೆಗಳ ಅಭಿವೃದ್ಧಿಯ ವಾಗ್ದಾನವನ್ನು ನೀಡಿದರು.

RELATED ARTICLES

Related Articles

TRENDING ARTICLES