Friday, April 26, 2024

ಈಚಲು ಮರದಲ್ಲಿ ಮೂಡಿರೋ ಉದ್ಭವ ಗಣಪತಿ

ಚಿಕ್ಕಮಗಳೂರು: ಎಲ್ಲಾ ಮರಗಳಂತೆ ಅದು ಕೂಡ ಒಂದು ಈಚಲು ಮರವಷ್ಟೆ. ಹತ್ತಾರು ವರ್ಷಗಳಿಂದಿದ್ದ ಆ ಮರದಲ್ಲಿ ಏನೂ ವಿಶೇಷತೆ ಇರಲಿಲ್ಲ. ಆದ್ರೆ, ಸಾಮಾನ್ಯವಾಗಿದ್ದ ಮರದಲ್ಲೀಗ ವಿಘ್ನ ನಿವಾರಕ ವಿಘ್ನೇಶ್ವರ ಪ್ರತ್ಯಕ್ಷನಾಗಿಬಿಟ್ಟಿದ್ದಾನೆ. ಆ ಈಚಲು ಮರದ ಗಣಪತಿಗೆ ಕೈಮುಗಿದು ಯಾವ್ದೆ ಕೆಲಸಕ್ಕೆ ಹೋದ್ರು ಶುಭವಾಗ್ತಿದ್ಯಂತೆ. ಈಚಲು ಮರದಲ್ಲಿ ಉದ್ಭವವಾಗಿರೋ ಈ ಗಣಪನ ಮತ್ತೊಂದು ಅದ್ಭುತ ಕಥೆ ಏನ್ ಗೊತ್ತಾ…. ಈ ಸ್ಟೋರಿ ನೋಡಿ.

ಈಚಲು ಮರದಲ್ಲಿ ಮೂಡಿರೋ ಉದ್ಭವ ಗಣಪತಿ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಈಚಲು ಮರದ ಗಣಪನಿಗೆ ಪೂಜೆ ಮಾಡಿ, ಕೈಮುಗಿಯುತ್ತಿರೋ ಭಕ್ತರು. ದೂರದಿಂದ ನೋಡಿದರೆ ಅದೊಂದು ಮಾಮೂಲಿ ಮರ ಅಷ್ಟೆ. ಹತ್ತಿರ ಹೋಗಿ ನೋಡಿದ್ರೆ ಬುಡದಲ್ಲಿ ವಿಘ್ನ ನಿವಾರಕ. ಅಚ್ಚರಿಯಂತೆ ಮೂಡಿರೋ ಗಣಪನಿಗೆ ಪೂಜೆಗೈದು ಇಷ್ಟಾರ್ಥಗಳನ್ನ ಈಡೇರಿಸೋ ಅಂತ ಬೇಡಿಕೊಳ್ತಿರೋ ಭಕ್ತರು. ಇಂತಹದ್ದೊಂದು ದೃಶ್ಯ ಕಂಡು ಬಂದದ್ದು ಚಿಕ್ಕಮಗಳೂರು ನಗರದ ಹೊಲವೊಂದರಲ್ಲಿ. ಹೊಲದಲ್ಲಿದ್ದ ಈಚಲು ಮರವನ್ನ ಜನ ಮಾಮೂಲಿ ಮರವಷ್ಟೆ ಎಂದು ಭಾವಿಸಿದ್ರು. ಆದ್ರೆ, ಈಚಲು ಮರದಲ್ಲಿ ಉದ್ಭವವಾಗಿರೋ ಗಣಪನನ್ನ ಕಂಡು ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ.

ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದರೂ ಕೂಡ ಎಲ್ಲವೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದ್ರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತೆರವಾದ ಭಕ್ತಿಗೆ ಕಾರಣವಾಗಿದೆ. ಹೊಲದಲ್ಲಿರುವ ಈಚಲು ಮರದಲ್ಲಿ ಗಣೇಶ ದರ್ಶನ ಕೊಟ್ಟಿರುವುದು ಸ್ಥಳೀಯರಿಗೆ ಅಚ್ಚರಿ ತಂದಿದೆ. ಗಣೇಶನಿಗೆ ಕೈ ಮುಗಿಯಬೇಕು ಅಂತ ದೇವಸ್ಥಾನ ಹುಡುಕಿಕೊಂಡು ಹೋಗುತ್ತಿದ್ದವರಿಗೆ ಇದೀಗ ಈಚಲು ಮರದ ಗಣೇಶನ ಸ್ಥಳ ಅಚ್ಚರಿ ಜೊತೆಗೆ ಸಂತಸ ತಂದಿದೆ. ಕಂಪ್ಲೀಟ್ ಗಣೇಶನನ್ನೇ ಹೋಲುವ ಮೂರ್ತಿಯನ್ನ ನೋಡಿ ಜನ ನಾ ಮುಂದು-ತಾ ಮುಂದು ಅಂತ ಗಣಪನಿಗೆ ಪೂಜೆ ಸಲ್ಲಿಸಿ ಬೇಡಿಕೊಳ್ತಿದ್ದಾರೆ.

ಒಟ್ಟಿನಲ್ಲಿ ಈಚಲು ಮರದಲ್ಲಿ ಗಣಪನನ್ನೇ ಹೋಲುವ ಆಕೃತಿ ಪತ್ತೆಯಾಗಿದ್ದು, ಸ್ಥಳೀಯರು ದಿನನಿತ್ಯ ಪೂಜೆ-ಪುನಸ್ಕಾರ ಮಾಡಿ ನಮಿಸುತ್ತಿದ್ದಾರೆ.

ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು.

RELATED ARTICLES

Related Articles

TRENDING ARTICLES