Tuesday, May 21, 2024

ಸಿಎಂ ಬದಲಾವಣೆ ಮಕ್ಕಳ ಆಟವೇ : ವಾಟಾಳ್ ನಾಗರಾಜ್

ಚಾಮರಾಜನಗರ : ಜನರ ಬದುಕನ್ನು ಮೂರಾಬಟ್ಟೆ ಮಾಡುವ ಲಾಕ್​​ ಡೌನ್​​ನನ್ನು ಏನಾದರೂ ಮತ್ತೇ ಜಾರಿ ಮಾಡಿದ್ದೇ ಆದರೆ ರಾಜ್ಯಾದ್ಯಂತಹೋರಾಟ ನಡೆಸುತ್ತೇನೆ ಎಂದು ಚಾಮರಾಜನಗರದಲ್ಲಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಸರ್ಕಾರವನ್ನ ಎಚ್ಚರಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದಲ್ಲೂ ಆಮೆಗತಿಯಲ್ಲಿ ಸಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಅವರು ವಾರಾಂತ್ಯ ನಿರ್ಬಂಧದ ವಿರುದ್ಧ ಇಡೀ ರಾಜ್ಯದಲ್ಲಿ ಮಾತನಾಡಿದ ಮೊದಲಿಗ ನಾನು. ನಿತ್ಯ ಕೂಲಿ ಮಾಡುವವರು, ವ್ಯಾಪಾರ-ವಹಿವಾಟು ನಡೆಸುತ್ತಿರುವವರು ನಿರ್ಬಂಧಗಳಿಂದ ಜರ್ಜರಿತರಾಗಿದ್ದಾರೆ. ವೀಕೆಂಡ್ ಕರ್ಫ್ಯೂ ಬೇಡವೇ ಬೇಡ. ಲಾಕ್ಡೌನ್​​ನಂತೂ ಮಾಡಲೇಬಾರದು, ಲಾಕ್ಡೌನ್ ಮಾಡಿದರೇ ರಾಜ್ಯಾದ್ಯಂತ ಹೋರಾಟ ನಡೆಸುತ್ತೇನೆ ಎಂದರು. ಇದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಬೊಮ್ಮಾಯಿ ಅವರು ಪ್ರಾಮಾಣಿಕವಾಗಿ ಚಿಂತನೆ ನಡೆಸಿ, ವಾರಾಂತ್ಯದ ನಿರ್ಬಂಧವನ್ನೂ ತೆಗೆದುಹಾಕಬೇಕೆಂದು ಒತ್ತಾಯಿಸಿದರು.

ಇನ್ನು ಸಿಎಂ ಬದಲಾವಣೆ ಮೂರ್ಖತನ, ಸಿಎಂ ಬೊಮ್ಮಾಯಿ ಅವರನ್ನು ಬದಲಾಯಿಸುವುದು ಮೂರ್ಖತನದ ಪರಮಾವಧಿ, ಆರಾರು ತಿಂಗಳಿಗೂ ಸಿಎಂ ಬದಲಿಸುತ್ತಾ ಹೋದರೆ ಆಡಳಿತ ನಡೆಸುವುದಾದರೂ ಹೇಗೆ, ಸಿಎಂ ಬದಲಾವಣೆ ಮಕ್ಕಳ ಆಟವೇ, ಬೊಮ್ಮಾಯಿ ಬಿಟ್ಟು ಅವರ ಪಕ್ಷದಲ್ಲಿ ನಾಯಕರ್ಯಾರು ಇದ್ದಾರೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ಇದೇ ವೇಳೆ, ನಗರದ ಅಂಬೇಡ್ಕರ್ ಕ್ರೀಡಾಂಗಣದ ದುಃಸ್ಥಿತಿ ಬಗ್ಗೆ ಮಾತನಾಡಿ, ಇನ್ನು 30 ಕೋಟಿ ರೂ.ನಷ್ಟು ಹಣ ಬೇಕಾಗಿದೆ. ಅದ್ಭುತವಾದ ಕ್ರೀಡಾಂಗಣ ಮಾಡಬೇಕಿದ್ದವರು ಹಾಳುಕೊಂಪೆ ಮಾಡಿದ್ದಾರೆ. ನಾನೇನಾದರೂ ಅಧಿಕಾರದಲ್ಲಿದ್ದರೇ ಇಲ್ಲಿವರೆಗೆ ರಣಜಿ ಟೆಸ್ಟ್ ನ್ನೂ ಇಲ್ಲಿ ಆಯೋಜಿಸುತ್ತಿದ್ದೆ ಎಂದು ವಾಟಾಳ್​​ ನಾಗರಾಜ್​​ ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES