ಗದಗ : ಆ ಓರ್ವ ಬಾಲಕಿ ಮುಸ್ಲಿಂ ಧರ್ಮದವಳು. ಚಿಕ್ಕಂದಿನಿಂದ ಆಟವಾಡಿ ಬೆಳೆದಿದ್ದೆಲ್ಲ ಹಿಂದೂ ಧರ್ಮದ ಕಮ್ಮಾರರ ಓಣಿಯಲ್ಲಿ. ಮದುವೆ ನಂತರ ಗಂಡನ ಮನೆಗೆ ಬಾಳ್ವೆ ಮಾಡಲು ಹೋದ್ರೆ ಗಂಡನ ಮನೆ ಸಹ ಬ್ರಾಹ್ಮಣರ ಓಣಿಯಲ್ಲಿ. ಇತ್ತ ಕಾಕತಾಳೀಯ ಎಂಬಂತೆ ಈ ತಾಯಿಗೆ ಮಗು ಜನಿಸಿದ್ದೂ ಕೂಡ ಗಣೇಶ ಹಬ್ಬದ ದಿನದಂದು. ಮುಸ್ಲಿಂ ತಾಯಿಯ ಭಾವೈಕ್ಯೆತೆ ಜೀವನಕ್ಕೆ ಸಾಕ್ಷಿಯಾಗಿದ್ದು ಗಣೇಶ ಚತುರ್ಥಿ ಸಂಭ್ರಮ.
ಇಂದು ಅದೆಷ್ಟೋ ಕುಟುಂಬಗಳು ಒಂದೇ ಧರ್ಮದವರಾಗಿದ್ರೂ, ಅಕ್ಕಪಕ್ಕದಲ್ಲೇ ವಾಸ ಮಾಡ್ತಿದ್ರೂ ಅವರಿಗೆ ಇವರು ಆಗೋಲ್ಲ…ಇವರಿಗೆ ಅವರು ಆಗೋಲ್ಲ. ಹೀಗೆ ಬೈದಾಟ, ಗುದ್ದಾಟಗಳ ನಡುವೆಯೇ ಅವರ ಜೀವನ ಸಾಗಿರುತ್ತೆ. ಇನ್ನು ಇತ್ತೀಚೆಗಂತೂ ಮುಸ್ಲಿಂ ಹಾಗೂ ಹಿಂದೂ ಧರ್ಮದ ನಡುವೆ ದ್ವೇಷದ ಬೀಜ ಹೆಮ್ಮರವಾಗಿ ಬೆಳೆದು ನಿಲ್ತಿದೆ. ಯಾರೋ ಕಿಡಿಗೇಡಿಗಳು, ಮತಾಂಧರು ಮಾಡೋ ತಪ್ಪಿಗೆ ಸೌಹಾರ್ದಯುತವಾಗಿ ಬಾಳೋ ಹಿಂದೂ ಮುಸ್ಲಿಂ ಕುಟುಂಬಗಳು ನೋವು ಅನುಭವಿಸುತ್ತಿವೆ.
ಒಂದೆಡೆ ಒಡಹುಟ್ಟಿದವರಿಗಿಂತ ಒಂದು ಕೈ ಹೆಚ್ಚಾಗಿಯೇ ಇರೋ ಹಿಂದೂ ಮುಸ್ಲಿಂ ಯುವಕರು ಯಾರೋ ಮಾಡೋ ತಪ್ಪಿಗೆ ತಲೆ ತಗ್ಗಿಸುವಂತಾಗಿದೆ. ಇನ್ನು ಇಂಥಹ ಎಷ್ಟೋ ಬೆಳವಣಿಗೆಗಳು ಜಗತ್ತಿನಲ್ಲಿ ನಡಿತಾ ಇದ್ರೂ ರಕ್ತ ಸಂಬಂಧಕ್ಕಿಂತ ಮಿಗಿಲಾಗಿ, ಜಾತಿ ಮೀರಿದ ಪ್ರೀತಿಯೊಂದಿಗೆ ಈಶ್ವರ್ ಅಲ್ಲಾ ತೇರೆ ನಾಮ್ ಸಬಕೋ ಸಮ್ಮತಿ ಹೇ ಭಗವಾನ್ ಅನ್ನೋ ದಾರಿಯಲ್ಲಿ ಭಜರಂಗಿ ಭಾಯಿಜಾನ್ ತಮ್ಮ ಪಾಡಿಗೆ ತಾವು ಪ್ರೀತಿಯಿಂದ ಜೀವನ ನಡೆಸ್ತಾನೆ ಇದ್ದಾರೆ.
ಹೀಗೆ ಇದೆಲ್ಲ ಒಂದೆಡೆಯಾದ್ರೆ ಇದೆಲ್ಲದಕ್ಕೂ ಹೊರತಾಗಿ ಇಲ್ಲೊಂದು ಕುಟುಂಬ ಎರಡೂ ಧರ್ಮದ ಆಚರಣೆಗಳನ್ನ ಪ್ರೀತಿ, ವಿಶ್ವಾಸ, ಬಾಂಧವ್ಯದ ಸಂಭಂದದೊಂದಿಗೆ ಆಚರಿಸೋ ಮೂಲಕ ಪ್ರೀತಿ ಗಟ್ಟಿಗೊಳಿಸ್ತಾ ಹೋಗ್ತಿದೆ. ಹೌದು..ಇದಕ್ಕೆ ಸಾಕ್ಷಿ ಗದಗ ಜಿಲ್ಲೆಯ ಕೋಟುಮುಚಗಿ ಗ್ರಾಮದ ರಫಿಕ್ ಕುಟುಂಬ. ಮುಖ್ಯವಾಗಿ ಈ ಸ್ಟೋರಿಯ ಕೇಂದ್ರಬಿಂದು ರಫಿಕ್ ಅವರ ಧರ್ಮಪತ್ನಿ. ಹೌದು.. ಚಿಕ್ಕಂದಿನಿಂದಲೂ ಗ್ರಾಮದ ಕಮ್ಮಾರರ ಓಣಿಯಲ್ಲಿ ಬೆಳೆಯುತ್ತಾ ಬಂದಿರೋ ಫಾತಿಮಾಗೆ ಗಣಪತಿ ಆರಾಧನೆ ಅಂದ್ರೆ ತುಂಬಾ ಅಚ್ಚುಮೆಚ್ಚು. ಫಾತಿಮಾಳನ್ನ ಇದೇ ಗ್ರಾಮದ ಮಹ್ಮದ್ ರಫಿಕ್ ಕುದುರಿ ಅನ್ನೋರಿಗೆ ನಿಖಾ ಮಾಡಿಕೊಡಲಾಗಿತ್ತು.
ಫಾತಿಮಾಳ ತವರು ಮನೆ ಕಮ್ಮಾರರ ಓಣಿಯಲ್ಲಿ ಇದ್ರೆ ಪತಿ ರಫಿಕ್ ಮನೆ ಬ್ರಾಹ್ಮಣರ ಓಣಿಯಲ್ಲಿ. ಹಾಗಾಗಿ ಇವರು ತಮ್ಮ ಮುಸ್ಲಿಂ ಧಾರ್ಮಿಕ ಹಬ್ಬಗಳ ಜೊತೆಯಲ್ಲಿ ಹಿಂದೂಗಳ ಪಂಚಮಿ, ಗಣೇಶ ಚುತರ್ಥಿ, ದೀಪಾವಳಿ, ವರಮಹಾಲಕ್ಷ್ಮೀ, ಯುಗಾದಿ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ. ಫಾತಿಮಾಳ ತವರು ಮನೆಯಲ್ಲಿಯೂ ಇಸ್ಲಾಂ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವಿನಾಯಕ ಆರಾಧನೆ ಮಾಡುತ್ತಾ ಬೆಳೆದಿದ್ದಾಳೆ.
ಮದುವೆಯಾದ ನಂತರ ಗಂಡನ ಮನೆಯಲ್ಲಿಯೂ ಪೂಜೆ, ಪುನಸ್ಕಾರಕ್ಕೆ ಸಹಕಾರ ನೀಡಿದ್ದಾರೆ. ಆದರೆ ಕಾಕತಾಳಿಯ ಎಂಬಂತೆ ಆಗಸ್ಟ 22ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ದಿನದಂದೇ ನರೇಗಲ್ ಪಟ್ಟಣದ ಡಾ. ನಾಗರಾಜ ಎಲ್. ಗ್ರಾಮಪುರೋಹಿತ್ ಅವರ ಆಸ್ಪತ್ರೆಯಲ್ಲಿ ಮಧ್ಯಾಹ್ನ 12:30 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾದ ನಂತರ ಸಾಕಷ್ಟು ಸಂಭ್ರಮಿಸಿರೋ ಎರೆಡೂ ಕುಟುಂಬಗಳು ಗಣೇಶನನ್ನ ಹೆಚ್ಚಾಗಿ ಆರಾಧಿಸುತ್ತಿದ್ದ ಫಾತಿಮಾಳಿಗೆ ಗಣೇಶ ಚತುರ್ಥಿಯಂದೇ ಗಂಡು ಮಗುವಿಗೆ ಜನ್ಮ ನೀಡೀರೋದು ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ.
ಎರಡೂ ಕುಟುಂಬಗಳ ಓಣಿಯಲ್ಲಿರೋ ಸರ್ವಧರ್ಮದ ಸ್ನೇಹಿತರು ಹಾಗೂ ಬಂಧು ಬಳಗದ ಹಾರೈಕೆ ರಫಿಕ್ ಅವರ ಭಾವೈಕ್ಯತೆ ಪ್ರೀತಿಗೆ ಮತ್ತಷ್ಟು ಮೆರಗು ನೀಡಿದೆ. ಹೀಗಾಗಿ ಈ ಎಲ್ಲ ಸಂಭ್ರಮದ ಸ್ಮರಣಾರ್ಥವಾಗಿ ರಫಿಕ್ ಈ ಬಾರಿ ಗಣಪತಿ ಮೂರ್ತಿಯನ್ನ ಕೊಡುಗೆಯಾಗಿ ನೀಡಿದ್ದಾನೆ. ತಾವು ವಾಸವಿರೋ ಮನೆ ಎದುರಿಗೆ ಪ್ರತಿವರ್ಷ ದುರ್ಗಾದೇವಿ ದೇವಸ್ಥಾನದಲ್ಲಿ ಸ್ನೇಹಿತರ ಬಳಗದಿಂದ ಗಣಪತಿ ಪ್ರತಿಷ್ಠಾಪಿಸುತ್ತಾರೆ. ಆ ಸ್ನೇಹಿತರ ಬಳಗದಲ್ಲಿ ರಫಿಕ್ ಕೂಡ ತನ್ನ ಸ್ನೇಹಿತರ ಬಳಗದೊಂದಿಗೆ ಮುಂಚೂಣಿಯಲ್ಲಿದ್ದು ಹಬ್ಬಗಳನ್ನ ಸಂಭ್ರಮಿಸುತ್ತಾನೆ.
ಈ ವರ್ಷ ತನಗೆ ಗಣೇಶ ಚತುರ್ಥಿಯಂದೇ ಗಂಡು ಮಗು ಹುಟ್ಟಿರೋ ಕಾರಣ ತಾನೇ ಸ್ವತಃ ಗಣಪತಿ ಮೂರ್ತಿ ಕೊಡಿಸಿದ್ದಾನೆ. ಜೊತೆಗೆ ದಂಪತಿಯ ಎರಡೂ ಕುಟುಂಬಸ್ಥರು ಗಣೇಶನಿಗೆ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿದ್ದಾರೆ. ದೇವನೊಬ್ಬ ನಾಮ ಹಲವು ಎಂದು ಹಿರಿಯರು ಹೇಳಿದ್ದಾರೆ. ನಾವು ಅಲ್ಲಾ ಹಾಗೂ ಗಣಪತಿ ಇಬ್ಬರನ್ನೂ ಆರಾಧನೆ ಮಾಡುತ್ತೇವೆ. ಹಿಂದೂ ಮುಸ್ಲಿಂ ಸಹೋದರರು ಎಂಬಂತ ಸಹಬಾಳ್ವೆಯಿಂದ ನಮ್ಮ ಹಳ್ಳಿಯಲ್ಲಿ ಸಂತೋಷದ ಜೀವನ ನಡೆಸುತ್ತಿದ್ದೇವೆ. ದೇವರ ಹೆಸರಿನಲ್ಲಿ ಶಾಂತಿ ಕದಡುವ ಬದಲಿಗೆ ಪ್ರೀತಿ ಹಂಚಬೇಕು ಹಾಗೂ ತುಳಿದು ನಡೆಯದೇ ತಿಳಿದು ಬಾಳಬೇಕು ಅನ್ನೋದು ಎರೆಡೂ ಮುಸ್ಲಿಂ ಕುಟುಂಬಸ್ಥರ ಹೃದಯದ ಮಾತಾಗಿದೆ.
ಅದೇನೆ ಇರಲಿ..ಇಲ್ಲಿ ಗಣೇಶ ಹಬ್ಬದ ದಿನದಂದೇ ಫಾತಿಮಾಳಿಗೆ ಗಂಡು ಮಗು ಹುಟ್ಟಿದ್ದು ಅನ್ನೋ ವಿಷಯ ನಿಜಕ್ಕೂ ಕಾಕತಾಳೀಯ. ಆದರೆ ಗಣೇಶನ ಆರಾಧಕಳಿಗೆ ತಾನಿಷ್ಟಪಟ್ಟ ದೇವರ ಹಬ್ಬದಂದೇ ತನಗೆ ಮಗು ಜನಿಸಿರೋದು ಎರಡೂ ಧರ್ಮದವರ ಬಾಂಧ್ಯವ್ಯ ಮತ್ತಷ್ಟು ಗಟ್ಟಿಗೊಳ್ಳಲಿಕ್ಕೆ ಕಾರಣವಾದ್ರೆ ಇತ್ತ ರಫಿಕ್ ಇದೇ ನೆಪದಲ್ಲಿ ಗಣಪತಿ ಮೂರ್ತಿ ಕೊಡುಗೆಯಾಗಿ ನೀಡಿ ಜಾತಿ ಮೀರಿದ ಪ್ರೀತಿಗೆ ಸಾಕ್ಷಿಯಾಗಿರೋದಂತು ಸತ್ಯ.
ಹೀಗಿರುವಾಗ ಇಂದು ತಮ್ಮ ಸ್ವಾರ್ಥಕೋಸ್ಕರ ಜಾತಿಗಳ ಮಧ್ಯೆ ಬೆಂಕಿ ಹಚ್ಚಿ ಮೋಜು ನೋಡುವ ಸೋಗುದಾರರು ಇಂಥಹ ಕುಟುಂಬಗಳನ್ನ ನೋಡಿಯಾದ್ರೂ ತಮ್ಮ ಜಾತ್ಯಾತೀತತೆಯ ಸೋಗಲಾಡಿತನವನ್ನ ಕಳಚಿಕೊಳ್ಳಬೇಕಾಗಿದೆ. ನಿಜವಾದ ಪ್ರೀತಿ, ಸ್ನೇಹ, ಭಾತೃತ್ವ ಇದ್ದಲ್ಲಿ ವಿಕೃತ ಮನೋಕಲ್ಮಶ ಹೊಂದಿರೋರನ್ನ ನಾಗರೀಕ ಸಮಾಜ ದೂರ ಸರಿಸುವ ಜವಾಬ್ದಾರಿಯುತ ಕರ್ತವ್ಯ ನಿಭಾಯಿಸಬೇಕಿದೆ.
ಮಹಾಲಿಂಗೇಶ್ ಹಿರೇಮಠ