ಬೆಂಗಳೂರು: ಏಪ್ರಿಲ್ 26 ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮತದಾನ ಶುಕ್ರವಾರ ನಡೆಯಲಿದೆ. ಆ ದಿನ ಮತದಾನ ಮಾಡಿ ಅದಕ್ಕೆ ಸಂಬಂಧಿಸಿದ ಕೈ ಬೆರಳಿಗೆ ಹಾಕಿದ ಶಾಯಿ ತೋರಿಸಿದವರಿಗೆ ಉಚಿತವಾಗಿ ಆಹಾರ ನೀಡಲು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ನ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ವಿಚಾರವಾಗಿ ಹೈಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ನೀಡಿದೆ.
ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಕೆಲವು ಹೋಟೆಲ್ಗಳು ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆಯೂ ಇದೇ ರೀತಿಯ ಪ್ರಯತ್ನ ಮಾಡಿದ್ದವು. ಹೋಟೆಲ್ಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಧ್ಯಂತರ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ವಿವಿಪ್ಯಾಟ್ ಮುದ್ರಿತ ಪ್ರತಿ ಪರಿಶೀಲನೆ ಪ್ರಕರಣ : ಇಂದು ಸುಪ್ರಿಂ ತೀರ್ಪು
ಅರ್ಜಿದಾರರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಬಾರದು ಎಂಬ ಷರತ್ತಿನೊಂದಿಗೆ, ಅರ್ಜಿದಾರರ ಸಂಘ ಮತ್ತು ಅದರ ಸದಸ್ಯರು 2024 ರ ಏಪ್ರಿಲ್ 26, ರಂದು ಬೆಂಗಳೂರಿನಲ್ಲಿ ಮತದಾರರಿಗೆ ಉಚಿತ ಆಹಾರವನ್ನು ವಿತರಿಸಲು ಅನುಮತಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಹೀಗಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮಾತ್ರ ಈ ವಿಧಾನವನ್ನು ಅನುಸರಿಸುತ್ತಿದ್ದೇವೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯ ವೇಳೆ ಉಚಿತ ಆಹಾರ ನೀಡಲಾಗಿತ್ತು. ಆಗಲೂ ನಮ್ಮ ವಿರುದ್ಧ ಯಾವುದೇ ನಿಯಮ ಉಲ್ಲಂಘನೆಯ ದೂರುಗಳು ದಾಖಲಾಗಿಲ್ಲ ಎಂದು ಅರ್ಜಿದಾರರು ಕೋರ್ಟ್ಗೆ ತಿಳಿಸಿದ್ದರು.