ರಾಮನಗರ : ನಾವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಲ್ಲ, ಮೋದಿ ಐಡಿಯಾಲಜಿ ವಿರುದ್ಧ ಇದ್ದೇವೆ. ಆರ್ಎಸ್ಎಸ್ ತತ್ವದ ವಿರುದ್ಧ ಇದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾತೆತ್ತಿದ್ರೆ ಮೋದಿ ಗ್ಯಾರಂಟಿ ಅಂತೀರಿ. ಎಲ್ಲದಕ್ಕೂ ಮೋದಿ, ಮೋದಿ ಅಂತಿರಿ. ಅದಕ್ಕಾಗಿ ನಾವು ಮೋದಿ ಹೆಸರನ್ನ ತೆಗೆದುಕೊಂಡು ಮಾತನಾಡ್ತೇವೆ ಎಂದು ತಿಳಿಸಿದರು.
ಮೋದಿ ಎಂಬ ವೈಯಕ್ತಿಕ ವ್ಯಕ್ತಿ ಬಗ್ಗೆ ನಮಗೆ ಅಸಮಾಧಾನ ಇಲ್ಲ. ನಮಗೆ ಮೋದಿ ತತ್ವದ ಮೇಲೆ ಅಸಮಾಧಾನ ಇದೆ. ಎಲ್ಲಾ ಕಡೆ ಬಿಜೆಪಿ ಸೋಲುವ ವಾತಾವರಣ ಇದೆ. ಹಾಗಾಗಿ, ಮೋದಿ ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ ಎಂದು ಕುಟುಕಿದರು.
ನಮ್ಮ ಪ್ರಣಾಳಿಕೆ ಬಗ್ಗೆ ಮಾತನಾಡ್ತಾರೆ. ಮೋದಿ ಬೇಕಿದ್ರೆ ಡಿಬೇಟ್(ಚರ್ಚೆ)ಗೆ ಬರಲಿ. ನಮ್ಮ ಪ್ರಣಾಳಿಕೆ, ನಿಮ್ಮ ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡೊಣ ಬನ್ನಿ. ನಮ್ಮ ಪ್ರಣಾಳಿಕೆಯನ್ನ ಮುಸ್ಲಿ ಲೀಗ್ ಅಂತಿರಲ್ಲಾ, ಬನ್ನಿ ಚರ್ಚೆಗೆ ಎಂದು ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲ್ ಹಾಕಿದರು.
ಜ್ಯದಲ್ಲಿ ಐದು ಗ್ಯಾರಂಟಿ ಯಶಸ್ವಿಯಾಗಿವೆ. ಈಗ ಮುಂದೆ ಮಹಿಳೆಯರಿಗೆ ಮಹಾಲಕ್ಷ್ಮಿ ಸ್ಕೀಂ ತರುತ್ತಿದ್ದೇವೆ. ವರ್ಷಕ್ಕೆ ಮಹಿಳೆಯರಿಗೆ 1 ಲಕ್ಷ ಹಣ ನೀಡುವ ಯೋಜನೆ ತರುತ್ತಿದ್ದೇವೆ. ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಚಿಂತನೆ ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.