ವಿಜಯಪುರ: ರಾಸಲೀಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಹಾಸನ ಸಂಸದ, ಮಾಜಿ ಪ್ರಧಾನಿ ದೇವೇಗೌಡ್ರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಶೋಕಾಸ್ ನೋಟಿಸ್ ನೀಡಿದೆ.
ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಪ್ರಜ್ವಲ್ ಬಂಧನಕ್ಕೆ ನೆರವಾಗಿ ಎಂದು ಕೋರಿರುವ ವಿಚಾರವಾಗಿ ಬಿಜೆಪಿ ನಾಯಕ ಅಣ್ಣಾಮಲೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇ 10ರೊಳಗೆ ವಿಚಾರಣೆಗೆ ಬರಲು ಪ್ರಜ್ವಲ್ ಪ್ಲ್ಯಾನ್
ವಿಜಯಪುರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯವಿಧಾನದ ಪ್ರಕಾರ, ಎಸ್ಐಟಿ ಅಥವಾ ಸಿಐಡಿ ಸಿಬಿಐಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ವಿದೇಶಕ್ಕೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಅಥವಾ ಇಂಟರ್ಪೋಲ್ ನೆರವು ಪಡೆಯಲು ರಾಜ್ಯ ಸರ್ಕಾರ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯಬೇಕು. ಬಳಿಕ ರೆಡ್ ಕಾರ್ನರ್ ಜಾರಿಗೊಳಿಸಲಾಗುತ್ತದೆ. ಆಗ ಆರೋಪಿ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೆ ಕೂಡಲೆ ಅವನನ್ನು ಅಲ್ಲಿನ ಪೊಲೀಸರು ಬಂಧಿಸುತ್ತಾರೆ. ಬಳಿಕ ಆರೋಪಿ ಬೇಕಾಗಿರುವ ಠಾಣೆಗೆ ಮಾಹಿತಿ ನೀಡುತ್ತಾರೆ.
ನಾನು ಕರ್ನಾಟಕದ ಸೇವೆ ಸಲ್ಲಿಸುತ್ತಿರುವಾಗ ಭೂಗತ ಪಾತಕಿ ಬನ್ನಂಜೆ ರಾಜನನ್ನು ಮೊರಾಕೊದಿಂದ ಪ್ರಧಾನಿಗೆ ಯಾವುದೇ ಪತ್ರ ಬರೆಯದೆ ಬಂಧಿಸಿ ಕರೆತಂದೆವು ಎಂದು ತಿಳಿಸಿದರು. ಇದು ಬರೀ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.