ಚಾಮರಾಜನಗರ: ಬಿಸಿಲಿನಿಂದ ಕಂಗೆಟ್ಟಿದ್ದ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಭರ್ಜರಿ ಮಳೆಯಾಗಿದ್ದು ವರುಣಾಗಮನಕ್ಕೆ ಜನರು ಹರ್ಷಗೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಅರಕಲವಾಡಿ, ಚೆನ್ನಪ್ಪನಪುರ, ಕೆ.ಗುಡಿ ಅರಣ್ಯ ಪ್ರದೇಶ, ಹನೂರು ಪಟ್ಟಣ ಹಾಗೂ ಹನೂರು ತಾಲೂಕಿನ ಹೂಗ್ಯಂ, ಶಾಗ್ಯ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ ಶಿವಪುರ, ಬೊಮ್ಮಲಾಪುರ, ಕೋಡಹಳ್ಳಿ, ಹಂಗಳ, ಮಾಡ್ರಹಳ್ಳಿ ಸುತ್ತಮುತ್ತಲು ಗುಡುಗು-ಸಿಡಿಲು ಆರ್ಭಟದೊಂದಿದೆ ಮಳೆ ಸುರಿದಿದೆ. ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾಡ್ಗಿಚ್ಚಿನ ಆತಂಕ ದೂರವಾಗಿದೆ.
ಇದನ್ನೂ ಓದಿ: ಇಂದಿನಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ!
ಬಿರುಗಾಳಿ ಸಹಿತ ಸುರಿದ ಕಾರಣ ಹಲವೆಡೆ ಮನೆ-ಬೆಳೆಗೆ ಹಾನಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯ ಪೆಟ್ಟಿಗೆ ಅಂಗಡಿ ಮೇಲೆ ಬೇವಿನಮರ ಬಿದ್ದು ಸಂಪೂರ್ಣ ಜಖಂ ಆಗಿದೆ. ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಮನೆಗಳ ಛಾವಣಿ ಹಾರಿಹೋಗಿದ್ದು ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದಲ್ಲೂ ಮನೆಗಳಿಗೆ ಹಾನಿಯಾಗಿವೆ.
ಹನೂರು ತಾಲೂಕಿನ ಶಾಗ್ಯ ಗ್ರಾಮದ ರತ್ಮಮ್ಮ ಎಂಬವರಿಗೆ ಸೇರಿದ 3 ಎಮ್ಮೆಗಳು ಸಿಡಿಲು ಬಡಿದು ಮೃತಪಟ್ಟಿವೆ. ಹನೂರು ತಾಲೂಕಿನ ಹೂಗ್ಯಂನಲ್ಲಿ 15 ಎಕರೆಯಲ್ಲಿ ಬೆಳೆದಿದ್ದ ಪರಂಗಿ, 20 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ನಾಶವಾಗಿದೆ, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಲೋಕೇಶ್ ಎಂಬವರಿಗೆ ಸೇರಿದ ಬಾಳೆ ತೋಟ, ನಾಗಶೆಟ್ಟಿ ಎಂಬವರ ಸಪೋಟಾ ತೋಟ ಬಿರುಗಾಳಿಗೆ ನೆಲಕಚ್ಚಿದೆ.