ಚನ್ನೈ: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡಿನ ಈರೋಡ್ ಸಂಸದ ಎ ಗಣೇಶಮೂರ್ತಿ ಗುರುವಾರ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಡಿಎಂಕೆ ಹಾಗೂ ಎಐಡಿಎಂಕೆ ಎರಡೂ ಪಕ್ಷಗಳು ಟಿಕೆಟ್ ನಿರಾಕರಿಸಿದ್ದವು (ತಮಿಳುನಾಡಿನಲ್ಲಿ ಎಂಡಿಎಂಕೆ ಹಾಗೂ ಡಿಎಂಕೆ ಪಕ್ಷದ ನಡುವೆ ಮೈತ್ರಿ ಇದ್ದು, ಕಳೆದ ಬಾರಿ ಅವರು ಡಿಎಂಕೆಯಿಂದ ಸ್ಪರ್ಧಿಸಿದ್ದರು) . ಈ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಇದನ್ನೂ ಓದಿ: ಕೋಲಾರ ಲೋಕಸಭಾ ಕ್ಷೇತ್ರ: ಚಿಕ್ಕಪೆದ್ದಣ್ಣ ಗೆ ಕುಮಾರಸ್ವಾಮಿ ಗಾಳ!
ಕೋವೈ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆ (ಕೆಎಂಸಿಎಚ್) ವೈದ್ಯರು ಗುರುವಾರ ಮುಂಜಾನೆ 5.05ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಈರೋಡ್ನ ಪೆರುಂದುರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಗಣೇಶಮೂರ್ತಿ ಎಂಡಿಎಂಕೆಯ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆಯ ಉದಯಿಸುವ ಸೂರ್ಯನ ಚಿಹ್ನೆಯಿಂದ ಸ್ಪರ್ಧಿಸಿದ್ದರು. ಇದಕ್ಕೂ ಮೊದಲು 2014ರಲ್ಲಿ ಎಂಡಿಎಂಕೆಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರೆ, 2009ರಲ್ಲಿ ಎಂಡಿಎಂಕೆಯಿಂದಲೇ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.