ರಾಮನಗರ : 100% ಈ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಇರುವುದಿಲ್ಲ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಭವಿಷ್ಯ ನುಡಿದರು.
ಕನಕಪುರದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಂಪಿ ಚುನಾವಣೆ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ನಾವೇ ಇರುತ್ತೇವೆ ಎಂದರು.
ಡಿ.ಕೆ. ಶಿವಕುಮಾರ್ ಜನಪರವಾಗಿ ಕೆಲಸ ಮಾಡಲ್ಲ. ನಾನು ಹಿಂದೆ ಮಂತ್ರಿಯಾಗಿದ್ದಾಗ ಅವರ ಕಾಡಿಗೆ ನುಗ್ಗಿ ಅಕ್ರಮ ಗಣಿಗಳನ್ನ ನಿಲ್ಲಿಸಿದ್ದೇವೆ. ಬಹಳ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದು ಕೇವಲ ಎಂಪಿ ಚುನಾವಣೆ ಅಲ್ಲ. ಈ ಚುನಾವಣೆ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಲಿದೆ. ಸರ್ಕಾರ ಅಸ್ತಿತ್ವ ಕಳೆದುಕೊಂಡರು ಆಶ್ಚರ್ಯ ಇಲ್ಲ ಎಂದು ಹೇಳಿದರು.
‘ಕೈ’ ಅಭ್ಯರ್ಥಿ ಹೀನಮಾನವಾಗಿ ಸೋಲ್ತಾನೆ
ಮುನಿರತ್ನ ಆರ್.ಆರ್. ನಗರದಲ್ಲಿ ಲೀಡ್ ಕೊಡ್ತಾರೆ. ಅವರು ಕನಕಪುರದಲ್ಲಿ ಲೀಡ್ ಪಡೆದರೆ, ನಾನು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಒಂದಾಗಿದ್ದೇವೆ. ಕಾಂಗ್ರೆಸ್ಗೆ ಠೇವಣಿ ಬರುವುದಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಹೀನಮಾನವಾಗಿ ಸೋಲ್ತಾನೆ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕನಕಪುರಕ್ಕೆ ನಾನೇ ಬರುತ್ತೇನೆ, ನಾನೇ ಉಸ್ತುವಾರಿ
ಕನಕಪುರಕ್ಕೆ ನಾನೇ ಬರುತ್ತೇನೆ, ನಾನೇ ಉಸ್ತುವಾರಿ. ಯಾರು ಹೆದರಬಾರದು, ನಾನೇ ನಿಲ್ಲುತ್ತೇನೆ ನಿಮ್ಮ ಜೊತೆ. ಮೋದಿರವರು ಕನಕಪುರದಲ್ಲೇ ಸಮಾವೇಶ ಮಾಡಲಿ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಗೆ ಸಿ.ಪಿ. ಯೋಗೇಶ್ವರ್ ಮನವಿ ಮಾಡಿದರು.