ಶಿವಮೊಗ್ಗ : ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರ ಕೈಯಲ್ಲಿ ಬಿಜೆಪಿ ಪಕ್ಷ ನಲುಗುತ್ತಿದೆ ಎಂದು ಬಿಎಸ್ವೈ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ಬಳಿಕ ನಿರೀಕ್ಷೆಗೆ ಮೀರಿ ಸ್ಪಂಧಿಸಿದ್ದಾರೆ. ನಾನು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಸಭೆ ಬಳಿಕ ಯಡಿಯೂರಪ್ಪನವರು ಸಂಧಾನಕ್ಕಾಗಿ ಆರಗ ಜ್ಞಾನೇಂದ್ರ ಅವರಿಗೆ ಕಳಿಸಿದ್ದರು. ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಮಾತ್ರವಲ್ಲ. ನನಗೆ ಅವರು ಮೋಸ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಗನ ಕೈಯಲ್ಲಿ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರು ತಿಳಿದುಕೊಂಡಿದ್ದಾರ ಎಂದು ಕುಟುಕಿದರು.
ಯತ್ನಾಳ್ಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು
ಲಿಂಗಾಯತರೇ ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬಹುದಿತ್ತು. ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಸಿ.ಟಿ. ರವಿಗೆ ಅಧ್ಯಕ್ಷ ಸ್ಥಾನ ನಿಡಬಹುದಿತ್ತು. ಹಿಂದುಳಿದ ನಾಯಕನಾದ ನನಗೆ ಅಧ್ಯಕ್ಷ ಮಾಡಬಹುದಿತ್ತು. ನಾನು ನನ್ನ ಪಕ್ಷಕ್ಕೆ ನಿಯತ್ತಾಗಿ ಇದ್ದೇನೆ. ಅವರು ಹೇಳಿದ ಹಾಗೆ ಕೇಳಿದ್ದೇನೆ. ಪಕ್ಷ ನಿಷ್ಟೆಯಿಂದ ಹಲವಾರು ವರ್ಷಗಳಿಂದ ಇದ್ದೇನೆ. ನನಗೆ ನೀಡಬಹುದಿತ್ತು, ಆದರೆ ನೀಡಲಿಲ್ಲ ಎಂದು ಈಶ್ವರಪ್ಪ ಹರಿಹಾಯ್ದರು.