Friday, April 26, 2024

ಪಾರಿವಾಳಗಳಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು : ಇತ್ತೀಚಿನ ದಿನಗಳಲ್ಲಿ ಪಾರಿವಾಳ ಸಾಕಾಣಿಕೆ ಯುವಕರ ಫ್ಯಾಷನ್ ಆಗ್ಬಿಟ್ಟಿದೆ. ಪಾರಿವಾಳ ಸಾಕಾಣಿಕೆ ಮಾಡಿ ಮಾರಾಟ ಮಾಡ್ತಿದ್ದ ಯುವಕನ ತಂದೆಯ ಹತ್ಯೆಯಾಗಿದೆ. ಅಂದ ಹಾಗೆ ಪಾರಿವಾಳ ಕಳವು ವಿಚಾರದಲ್ಲಿ ನಡೆದ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿದೆ.

ದಾರುಣವಾಗಿ ಹತ್ಯೆಯಾದ ವ್ಯಕ್ತಿ ಹೆಸ್ರು ಗೋವಿಂದರಾಜು. ಮೈಸೂರಿನ ಸುಣ್ಣದ ಕೇರಿ ನಿವಾಸಿ. ಈ ಮೃತ ಗೋವಿಂದರಾಜು ಪುತ್ರ ಉಲ್ಲಾಸ್ ತನ್ನ ಮನೆಯಲ್ಲಿ 38 ಪಾರಿವಾಳಗಳನ್ನು ಸಾಕಿದ್ದನಂತೆ. ಈ ಉಲ್ಲಾಸ್ ಸಾಕಿದ್ದ ಪಾರಿವಾಳಗಳು ಒಮ್ಮಿಂದೊಮ್ಮೆ ಮನೆಯಿಂದ ಕಳುವಾಗಿದ್ದವಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಲ್ಲಾಸ್ ಮನೆಯವರು ಪಾರಿವಾಳ ಕದ್ದವರನ್ನ ಬೈಕೊಂಡು ಸುಮ್ಮನಾಗಿದ್ರು. ಆದ್ರೆ, ಉಲ್ಲಾಸ್ ಸ್ನೇಹಿತ ಎದುರು ಮನೆ ಯುವಕರು ಪಾರಿವಾಳ ಕದ್ದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹೋಗಿ ಪರಿಶೀಲನೆ ಮಾಡಿದ್ದುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ‌.

ಉಲ್ಲಾಸ್ ಸ್ನೇಹಿತ ಪ್ರಮೋದ್ ಎದುರು ಮನೆಯ ಯುವಕರು ಪಾರಿವಾಳ ಕದ್ದಿದ್ದಾರೆ ಅನ್ನೋ ಅನುಮಾನದಿಂದ ಹೋಗಿ ವಿಚಾರಿಸಿದ್ದ ವೇಳೆ ಎದುರು ಮನೆಯ ವಿನಾಯಕ್,ಪ್ರಮೋದ್ ನಾಯಕ್,ಜಯಶಂಕರ್, ಮನೋಜ್ ನಾಯಕ್,ವಿಜಯ್ ಎಂಬುವವರು ಪ್ರಮೋದ್ ಮೇಲೆ ಹಲ್ಲೆ ಮಾಡಿದ್ದಾರಂತೆ.ಬಳಿಕ ಘಟನೆ ಸಂಬಂಧ ಉಲ್ಲಾಸ್ ತಂದೆ ಗೋವಿಂದ ರಾಜು ಹಲ್ಲೆಯನ್ನ ಪ್ರಶ್ನೆ ಮಾಡಿ ಮನೆಗೆ ಬಂದಿದ್ರು.ಬಳಿಕ ಮನೆಗೆ ಬಂದಿದ್ದ ಗೋವಿಂದರಾಜುವನ್ನ ಹಿಂಬಾಲಿಸಿ ಬಂದ ಈ ನಾಲ್ವರು ಗೋವಿಂದರಾಜು ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಐವರು ಯುವಕರ ಹಲ್ಲೆಯಿಂದ ಕುಸಿದು ಬಿದ್ದ ಗೋವಿಂದರಾಜು ತೀವ್ರ ಅಸ್ವಸ್ಥರಾಗಿದ್ರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಒಟ್ಟಿನಲ್ಲಿ, ಪಾರಿವಾಳದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದಂತೂ ದುರಂತವೇ ಸರಿ‌‌. ಹದಿಹರೆಯದ ಈ ಯುವಕರು ಹುಡುಗಾಟಕ್ಕೋ ಅಥವಾ ಹಠಕ್ಕೆ ಬಿದ್ದೋ ತಾವು ಮಾಡಿದ ತಪ್ಪಿನಿಂದ ಮಾಡಬಾರದ ತಪ್ಪು ಮಾಡಿ ಜೈಲು ಕಂಬಿ ಎಣಿಸುವಂತಾಗಿದೆ.

RELATED ARTICLES

Related Articles

TRENDING ARTICLES