ಭೋಪಾಲ್ : ಕಮಲ್ನಾಥ್ ಸಾರಥ್ಯದ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ಮಧ್ಯಪ್ರದೇಶದ ರಾಜ್ಯಪಾಲ ಸಡನ್ ಶಾಕ್ ಕೊಟ್ಟಿದ್ದಾರೆ. ಸಿಎಂ ಕಮಲ್ನಾಥ್ಗೆ ಪತ್ರದ ಮೂಲಕ ತಾಕೀತು ಮಾಡಿರುವ ಅವರು ನಾಳೆಯೇ ವಿಶ್ವಾಸಮತ ಸಾಬೀತು ಮಾಡುವಂತೆ ಹೇಳಿದ್ದಾರೆ. ನಾಳೆ ನೀವು ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ್ರೆ ನಿಮ್ಮ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತವಿಲ್ಲ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬಜೆಟ್ ಅಧಿವೇಶನ ಆರಂಭವಾದ ಬೆನ್ನಲ್ಲೇ ರಾಜ್ಯಪಾಲರ ಭಾಷಣದ ಬಳಿಕ ಅಧಿವೇಶನವನ್ನು ಮಾರ್ಚ್ 26ಕ್ಕೆ ಮುಂದೂಡಲಾಯ್ತು. ಅಧಿವೇಶನವನ್ನು 10 ದಿನಗಳ ಕಾಲ ಮುಂದೂಡಿ ತನ್ನ ಶಾಸಕರನ್ನು ಒಗ್ಗೂಡಿಸುವ ತಂತ್ರಕ್ಕೆ ಕಾಂಗ್ರೆಸ್ ಶರಣಾಯಿತು. ಆದರೆ ಇದನ್ನು ವಿರೋಧಿಸಿದ ಬಿಜೆಪಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಜೊತೆಯಲ್ಲೇ ರಾಜ್ಯಪಾಲರನ್ನು ಭೇಟಿಯಾಯಿತು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮನವಿ ಮೇರೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯಪಾಲರು, ನಾಳೆಯೇ ವಿಶ್ವಾಸಮತ ಸಾಬೀತುಪಡಿಸುವಂತೆ ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ನಿಂದ ಬಂಡಾಯವೆದ್ದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ, ತನ್ನ ಜೊತೆಗೆ 19 ಶಾಸಕರನ್ನು ಸೆಳೆದುಕೊಂಡಿರುವುದರಿಂದ ಹಾಗೂ ಶಾಸಕರು ರಾಜಿನಾಮೆ ನೀಡಿರುವುದರಿಂದ ಅಲ್ಪಮತಕ್ಕೆ ಕುಸಿದಿದೆ ಹೀಗಾಗಿ ನಾಳಿನ ವಿಶ್ವಾಸಮತ ಯಾಚನೆ ವೇಳೆಗೆ ಕಾಮಗ್ರೆಸ್ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ.