ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಮುಂದೆ ನಡೆಯಲಿರುವ ಉಪಚುನಾವಣೆಗೆ ಈಗಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಶಿರಾ ವಿಧಾನಸಭಾ ಕ್ಷೇತ್ರದ ರಾಜಕಾರಣ ರಂಗೇರಿದ್ದು, ಮಧುಗಿರಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ ವಿಧಾನಸಭೆಯಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕೆ. ಎನ್ ರಾಜಣ್ಣ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದೇ ತಿಂಗಳ (ಆಗಸ್ಟ್) 27ರಂದು ಸತ್ಯನಾರಾಯಣರವರ ತಿಥಿ ಕಾರ್ಯ ಇದ್ದು, 27ರ ನಂತರ ರಾಜಕೀಯ ಚಟುವಟಿಕೆಗಳು ನಡೆಯುತ್ತವೆ. ತಿಥಿ ಸಂದರ್ಭದಲ್ಲಿ ರಾಜಕೀಯ ಸರಿಯಲ್ಲ. ಮುಂದಿನ ದಿನಗಳಲ್ಲಿ ಮುಖಂಡರ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಕಳೆದ ಬಾರಿ ಶಿರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಟಿ.ಬಿ ಜಯಚಂದ್ರ, ಜೆಡಿಎಸ್ನ ಸತ್ಯನಾರಾಯಣ್ ವಿರುದ್ಧ ಸೋತಿದ್ದರು. ಕೆ.ಎನ್ ರಾಜಣ್ಣ ಮತ್ತು ಟಿ.ಬಿ ಜಯಚಂದ್ರ ಇಬ್ಬರೂ ಕಾಂಗ್ರೆಸ್ನವರೇ ಆಗಿದ್ದರೂ ರಾಜಕೀಯ ಬದ್ಧ ವೈರಿಗಳು. ಹಾಗಾಗಿ ಶಿರಾ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಟಿ.ಬಿ ಜಯಚಂದ್ರ ಎದುರು ರಾಜಣ್ಣ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ.
-ಜೆ.ಎಸ್.ಹೇಮಂತ್ ಕುಮಾರ್