ಹುಬ್ಬಳ್ಳಿ : ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಕೋರರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಗೂ ಬೆಂಕಿ ಹಚ್ಚುತ್ತಾರೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಿಡಿನುಡಿಗಳನ್ನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿದ್ದು ಕಾಂಗ್ರೆಸ್ನ ಕನಸುಗಳು..! ತಾವೆ ಸಾಕಿದ ಗಿಣಿ ಇವತ್ತು ಕಾಂಗ್ರೆಸ್ನವರಿಗೆ ಕುಕ್ಕುತ್ತಿದೆ. ಕಾಂಗ್ರೆಸ್ ನವರು ಓಲೈಕೆ ಮಾಡಿದ್ದಾರೆ, ಇವತ್ತು ನಿಮ್ಮ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನೀವೆ ಕಟ್ಟಿ ಬೆಳಸಿದ ಗಿಳಿಗಳು, ಇವತ್ತು ನಿಮಗೆ ಕುಕ್ಕುತ್ತಿವೆ. ಇವರನ್ನ ಇದೇ ರೀತಿ ಬಿಟ್ಟರೆ ವಿಧಾನ ಸೌಧಕ್ಕೆ ಬೆಂಕಿ ಹಚ್ಚುತ್ತಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮನೆಗೂ ಬೆಂಕಿ ಹಚ್ಚುತ್ತಾರೆ. ಇವರಿಂದ ದೇಶಕ್ಕೆ ದೊಡ್ಡ ಗಂಡಾಂತರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಫ್ಐ ಮತ್ತು ಎಸ್ಡಿಪಿಐ ಬ್ಯಾನ್ ಮಾಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.
ಸಾಮಾನ್ಯ ನಾಗರಿಕರನ್ನ ಬಿಜೆಪಿಯವರು ಬಲಿ ಕೊಡ್ತಾ ಇದ್ದಾರೆ. ಬಶೀರ ಎನ್ನುವ ವ್ಯಕ್ತಿ ಲಕ್ಷ್ಮಿ ಮತ್ತು ಸರಸ್ವತಿಯ ಬಗ್ಗೆ ಬಹಳ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾನೆ. ಹಾಗಿದ್ದರೆ ನಾವು ಶಾಸಕ ಜಮೀರ್ ಅಹ್ಮದ್ ಅವರ ಮನೆ ಸುಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಯಾರು ಸರ್ಕಾರದ ಆಸ್ತಿಪಾಸ್ತಿಗಳನ್ನ ಹಾನಿ ಮಾಡಿದ್ದಾರೆ, ಅವರ ಆಸ್ತಿಯನ್ನ ಜಪ್ತಿ ಮಾಡಬೇಕು.
ಈ ಘಟನೆಯಲ್ಲಿ ಗುಪ್ತಚರ ಇಲಾಖೆ ಫೆಲ್ಯುವರ್ ಆಗಿದೆ. ಜಮೀರ್ ಅಹ್ಮದ್ ಬಹಳ ಓವರ್ ಆ್ಯಕ್ಟ್ ಮಾಡ್ತಾ ಇದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಘಟನೆ ಹಿಂದೆ ಜಮೀರ ಅಹ್ಮದ್ ಅವರ ಕೈವಾಡವಿದೆ ಎಂದು ಹರಿಹಾಯ್ದಿದ್ದಾರೆ.
ಮೃತರಿಗೆ ಪರಿಹಾರ ಘೋಷಣೆ ಮಾಡುವ ಮೂಲಕ ಗಲಭೆ ಮಾಡಲು ಪ್ರೋತ್ಸಾಹ ನೀಡ್ತಾ ಇದ್ದಾರೆ.
ಎಸ್ಡಿಪಿಐಯನ್ನ ಬಿಜೆಪಿಯವರೇ ತಮ್ಮ ರಾಜಕೀಯ ಲಾಭಕ್ಕಾಗಿ ಬೆಳೆಸುತ್ತಿದ್ದಾರೆ ಎಂದು ಸಿಡಿದಿದ್ದಾರೆ.