ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಮಾಸದ ಸಂಭ್ರಮಕ್ಕೆ ಕೊರೊನಾ ತಣ್ಣೀರೆರೆಚಿದೆ.ಆಷಾಢ ಶುಕ್ರವಾರದ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದೆ. ಮೂರನೇ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ನೆರವೇರಿತು.
ಕೊರೊನಾ ಸೋಂಕು ಹರಡುವ ಭೀತಿಯ ಕಾರಣದಿಂದ ಇಂದು ಮೂರನೇ ಆಷಾಡ ಶುಕ್ರವಾರವೂ ಚಾಮುಂಡೇಶ್ವರಿಯ ದೇವಾಲಯ ಬಂದ್ ಮಾಡಲಾಗಿದ್ದುನಿತ್ಯ ಪೂಜೆಗೆ ಮಾತ್ರ ಸೀಮಿತವಾಯಿತು.ಚಾಮುಂಡೇಶ್ವರಿ ದೇವಿಗೆ ಅಭಿಷೇಕ ನೇರವೇರಿಸಿದ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು.ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ. ಶಶೀಶೇಖರ್ ದೀಕ್ಷೀತ್ ನೇತೃತ್ವದಲ್ಲಿ ಪೂಜೆ ಕೈಂಕರ್ಯಗಳು ನೆರವೇರಿತು.ಇಂದು ತಾಯಿ ಚಾಮುಂಡೇಶ್ವರಿಗೆ ದುರ್ಗಾ ಅಲಂಕಾರ ಮಾಡಲಾಗಿತ್ತು.ಕೊರೊನಾ ವೈರಸ್ ಭೀತಿಯ ಕಾರಣದಿಂದಾಗಿ ಇಂದು ಕೂಡ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು.
ಪ್ರತಿ ವರ್ಷದ ಆಷಾಡ ಮಾಸದ ಶುಕ್ರವಾರಗಳಂದು ಬೆಳಗಿನ ಜಾವ 5.30ರಿಂದ ರಾತ್ರಿ 10ರವರೆಗೂ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಲಕ್ಷಾಂತರ ಮಂದಿ ಭಕ್ತರು ಗಣ್ಯಾತಿಗಣ್ಯರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದರು.ಆದರೆ ಇಂದು ಬೆಳಿಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ದೇವಾಲಯದ ಬಾಗಿಲು ಬಂದ್ ಮಾಡಲಾಯಿತು. ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಮೆರವಣಿಗೆ ದೇವಸ್ಥಾನದ ಆವರಣದೊಳಗೆ ನೆರವೇರಿತು. ಈ ಬಾರಿಯ ಮೂರನೇ ಆಷಾಡ ಶುಕ್ರವಾರವೂ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಲ್ಲದೇ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.
ಮನೆಯಲ್ಲಿ ಕುಳಿತೇ ಪ್ರಾರ್ಥನೆ ಸಲ್ಲಿಸುವ ಮೂಲಕ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸುವಂತೆ ಪ್ರಧಾನ ಅರ್ಚಕ ಡಾ ಶಶೀಶೇಖರ್ ದೀಕ್ಷೀತ್ ಕರೆ ನೀಡಿದರು.ಸಾರ್ವಜನಿಕ ಪ್ರವೇಶ ನಿಷಿದ್ದವಾದರೂ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿಯ ದರುಶನ ಪಡೆದರು.ಸಾರ್ವಜನಿಕ ಪ್ರವೇಶ ನಿರ್ಭಂಧಿಸಿದ್ದರೂ ಇಬ್ಬರು ಗಣ್ಯ ವ್ಯಕ್ತಿಗಳು ಬೆಂಬಲಿಗರ ಜೊತೆ ಬಂದು ದರುಶನ ಪಡೆದಿದ್ದು ಚರ್ಚೆಗೆ ಗ್ರಾಸವಾಯಿತು.ಸಾರ್ವಜನಿಕರಿಗೆ ಒಂದು ಕಾನೂನು ಗಣ್ಯರಿಗೆ ಒಂದು ಕಾನೂನಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಯಿತು…