ಹಬ್ಬ ಹರಿ ದಿನಗಳ ಸಂದರ್ಭದಲ್ಲಿ ದೇವಾಲಯಗಳಲ್ಲಿ ದೇವರಿಗೆ ಹೂವುಗಳು, ಹಣ್ಣುಗಳು, ಆಭರಣಗಳು, ನೋಟು ಹಾಗೂ ನಾಣ್ಯಗಳ ವಿಶೇಷ ಅಲಂಕಾರಗಳನ್ನು ಮಾಡುವ ವಾಡಿಕೆಯಿದೆ. ದೇವರನ್ನು ಈ ವಿಶೇಷ ಅಲಂಕಾರಗಳಲ್ಲಿ ನೋಡಲೆಂದೇ ಭಕ್ತರು ಬರುತ್ತಾರೆ. ಅದೇ ರೀತಿ ಗಣೇಶ ಚತುರ್ಥಿಯ ಪ್ರಯುಕ್ತ ಇಲ್ಲೊಂದು ಕಡೆ ಗಣೇಶನಿಗೆ ಸುಮಾರು 2.3 ಕೋಟಿ ರೂ. ಮೌಲ್ಯದ ಗರಿ ಗರಿ ನೋಟುಗಳಿಂದ ವಿಶೇಷ ಅಲಂಕಾರವನ್ನು ಮಾಡಲಾಗಿದೆ.
ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ಗಣೇಶ ಚತುರ್ಥಿಯಂದು ಕೂರಿಸಿದ ಗಣೇಶನಿಗೆ ಕೋಟಿ ಕೋಟಿ ನೋಟುಗಳಿಂದ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿ ಪ್ರತೀ ವರ್ಷ ಭಕ್ತರು ನೀಡುವ ಕಾಣಿಕೆಯಿಂದ ಗಣಪನಿಗೆ ನೋಟಿನ ಅಲಂಕಾರವನ್ನು ಮಾಡಲಾಗುತ್ತಿದೆ.
ಇಲ್ಲಿನ ಸಂಕ ಬಾಲಾಜಿ ಗುಪ್ತಾ ಬ್ರದರ್ಸ್ ಮತ್ತು ಆರ್ಯ ವೈಶ್ಯ ಸಂಘ ಜಂಟಿಯಾಗಿ ಆಯೋಜಿಸುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಕೂಡಾ ಭಕ್ತರಿಂದ ಹಣ ಸಂಗ್ರಹಿಸಿ ಗಣೇಶನಿಗೆ ನೋಟುಗಳ ವಿಶೇಷ ಅಲಂಕಾರವನ್ನು ಮಾಡುತ್ತಾರೆ. ಈ ಬಾರಿ 10, 20 ರೂ. ನೋಟುಗಳಿಂದ ಹಿಡಿದು 500 ರೂಪಾಯಿ ನೋಟಿನ ವರೆಗೆ 2.3 ಕೋಟಿ ರೂಪಾಯಿಗಳ ಬಗೆ ಬಗೆ ಮಾಲೆಗಳಿಂದ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.