ಪ್ರತಿಸಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಂದಾಗಲೂ ಒಂದು ಪ್ರಶ್ನೆ ಮೂಡುತ್ತೆ. ವರನಟ ಡಾ.ರಾಜ್ಕುಮಾರ್ಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ. ರಾಜ್ಕುಮಾರ್ಗಿಂತ ನಟ ಬೇಕಾ..? ಅವರ ನಟನೆಗೆ ಅದ್ಯಾಕೆ ಒಂದೇ ರಾಷ್ಟ್ರಪ್ರಶಸ್ತಿ ಬರಲಿಲ್ಲ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಕನ್ನಡಿಗರ ಮನಸಲ್ಲಿ ಇದ್ದೇ ಇದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಯೆಸ್, ಪ್ರತಿ ಸಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅನೌನ್ಸ್ ಅದಾಗಲೂ ಈ ಪ್ರಶ್ನೆ ಕನ್ನಡಿಗರನ್ನ ಕಾಡುತ್ತೆ. ಈ ಬಾರಿ ಕನ್ನಡದ ರಿಷಬ್ ಶೆಟ್ಟಿ ಪಾಲಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಸಹಜವಾಗೇ ಇದು ಕನ್ನಡಿಗರಿಗೆ ಖುಷಿ ತಂದಿದೆ. ಅಸಲಿಗೆ ಕನ್ನಡದ ಮಟ್ಟಿಗೆ ಅತ್ಯುತ್ತಮ ನಟ ನ್ಯಾಷನಲ್ ಅವಾರ್ಡ್ ಬಂದಿರೋದು 4 ಬಾರಿ ಮಾತ್ರ.
ಚೋಮನದುಡಿ ಸಿನಿಮಾಗೆ ವಾಸುದೇವರಾಯರಿಗೆ, ತಬರನ ಕಥೆ ಸಿನಿಮಾದ ನಟನೆಗೆ ಚಾರುಹಾಸನ್ಗೆ ಮತ್ತು 2014ರಲ್ಲಿ ‘ನಾನು ಅವನಲ್ಲ ಅವಳು’ ಸಿನಿಮಾದ ನಟನೆಗೆ ಸಂಚಾರಿ ವಿಜಯ್ಗೆ ಈ ಪ್ರಶಸ್ತಿ ಬಂದಿತ್ತು. ಇದೀಗ ರಿಷಬ್ ಈ ಅವಾರ್ಡ್ ಪಡೆದುಕೊಂಡು 4ನೇ ಬಾರಿ ಪ್ರಶಸ್ತಿಯನ್ನ ಕನ್ನಡಕ್ಕೆ ತಂದುಕೊಟ್ಟಿದ್ದಾರೆ.
ಹಾಗಾದ್ರೆ 90 ವರ್ಷಗಳ ಇತಿಹಾಸವಿರೋ ಕನ್ನಡ ಚಿತ್ರರಂಗದಲ್ಲಿ ಇವರುಗಳಷ್ಟೇ ಶ್ರೇಷ್ಟನಟರಾ..? ನೂರಾರು ಚಿತ್ರಗಳನ್ನ ಮಾಡಿದ ಅದ್ಭುತ ನಟರುಗಳಿಗೆ ಯಾಕೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲ. ಬೇರೆಲ್ಲಾ ಯಾಕೆ ನಮ್ಮ ವರನಟ ಡಾ.ರಾಜ್ಕುಮಾರ್ಗೆ ಯಾಕೆ ಈ ಪ್ರಶಸ್ತಿ ಕೊಡಲಿಲ್ಲ ಅನ್ನೋ ಪ್ರಶ್ನೆ ಕಾಡದೇ ಇರಲ್ಲ.
ಇದನ್ನೂ ಓದಿ: National Film Award 2024: ಕೆಜಿಎಫ್ 2 & ಕಾಂತಾರ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ
ಅಸಲಿಗೆ 5 ದಶಕಗಳ ಕಾಲ ಕನ್ನಡ ಸಿನಿಮಾರಂಗದಲ್ಲಿ ನಟಸಾರ್ವಭೌಮನಾಗಿ ಮರೆದು 205 ಸಿನಿಮಾಗಳಲ್ಲಿ ನಟಿಸಿದ್ದಾರೆ ಡಾ.ರಾಜ್ಕುಮಾರ್. ಅಣ್ಣಾವ್ರ ಕಲಾಸೇವೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಜೀವನಚೈತ್ರ ಸಿನಿಮಾದ ಗಾಯನಕ್ಕೆ ಅತ್ಯುತ್ತಮ ಗಾಯಕ ರಾಷ್ಟ್ರಪ್ರಶಸ್ತಿ ಬಂದಿದೆ. ಆದ್ರೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಮಾತ್ರ ಅಣ್ಣಾವ್ರಿಗೆ ಸಿಗಲೇ ಇಲ್ಲ.
ಹಾಗ್ ನೋಡಿದ್ರೆ ಎರಡು ಬಾರಿ ಡಾ.ರಾಜ್ಕುಮಾರ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ರೇಸ್ನಲ್ಲಿ ಕೊನೆ ಹಂತಕ್ಕೆ ಹೋಗಿದ್ರು. ಆದ್ರೆ ಅದ್ಯಾವುದೋ ರಾಜಕೀಯ ರಾಜ್ಗೆ ಪ್ರಶಸ್ತಿ ಸಿಗದಂತೆ ತಡೆದುಬಿಟ್ತು. 1971ರಲ್ಲಿ ಕಸ್ತೂರಿ ನಿವಾಸ ಸಿನಿಮಾಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಇನ್ನೇನು ಅನೌನ್ಸ್ ಆಗಿತ್ತು. ರಾತ್ರಿ ಆಕಾಶವಾಣಿಯಲ್ಲಿ ರಾಜ್ಕುಮಾರ್ಗೆ ಪ್ರಶಸ್ತಿ ಬಂದಿದೆ ಅಂತ ಪ್ರಕಟ ಕೂಡ ಆಗಿತ್ತು. ಆದ್ರೆ ರಾತ್ರೋರಾತ್ರಿ ಪ್ರಭಾವ ಬೀರಿ ಆ ಪ್ರಶಸ್ತಿಯನ್ನ ಎಂ.ಜಿ.ಆರ್ಗೆ ಕೊಟ್ಟುಬಿಟ್ರು.
ಇದನ್ನೂ ಓದಿ: “ಗೌರಿ” ಸಮರ ಶುರು, ಯುವ ಜೋಡಿಗೆ ಸೈ ಅಂದ್ರಾ ಪ್ರೇಕ್ಷಕರು!?: ಪವರ್ ರಿವ್ಯೂ
ಇನ್ನೂ 1977ರಲ್ಲೂ ಸನಾದಿ ಅಪ್ಪಣ್ಣ ಸಿನಿಮಾ ನಟನೆಗೆ ಅಣ್ಣಾವ್ರಿಗೆ ರಾಷ್ಟ್ರಪ್ರಶಸ್ತಿ ಅನೌನ್ಸ್ ಆಗಿತ್ತು. ಆದ್ರೆ ಆಗ ಈ ಸಿನಿಮಾದಲ್ಲಿ ಹಾಡುಗಳಿವೆ.. ಇದೊಂದು ಕಮರ್ಷಿಯಲ್ ಸಿನಿಮಾ.. ಈ ಸಿನಿಮಾಗೆ ಪ್ರಶಸ್ತಿ ಕೊಡೋದು ಬೇಡ ಅಂತ ಕೆಲ ಕಮೀಟಿ ಮೆಂಬರ್ಸ್ ಪಟ್ಟು ಹಿಡಿದು ಬಿಟ್ರಂತೆ. ಹೀಗಾಗಿ ಮತ್ತೆ ಅಣ್ಣಾವ್ರಿಗೆ ಪ್ರಶಸ್ತಿ ತಪ್ಪಿಹೋಯ್ತು, ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ಮತ್ತು ಬರಹಗಾರ ಪ್ರಕಾಶ್ ರಾಜ್ ಮೇಹು.
ಹಾಗೆ ನೋಡಿದ್ರೆ ಡಾ.ರಾಜ್ ನಟಿಸಿದ ಅನೇಕ ಪಾತ್ರಗಳು ರಾಷ್ಟ್ರಪ್ರಶಸ್ತಿಯನ್ನೂ ಮೀರಿಸುವಂತೆ ಇವೆ. ಆದ್ರೆ ಚಿತ್ರರಂಗದ ರಾಜಕೀಯ ರಾಜ್ಕುಮಾರ್ಗೆ ಪ್ರಶಸ್ತಿಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾಯ್ತು. ಆ ಕಾಲದಲ್ಲಿ ಕಮರ್ಷಿಯಲ್ ಸಿನಿಮಾಗಳಿಗೆ ಅವಾರ್ಡ್ ಕೊಡುವ ಪರಿಪಾಠ ಇರಲಿಲ್ಲ ಅದನ್ನೇ ನೆಪ ಮಾಡಿಕೊಂಡು ಕೆಲ ವಿರೋಧಿಗಳು ರಾಜ್ಕುಮಾರ್ಗೆ ಪ್ರಶಸ್ತಿ ಬಾರದಂತೆ ತಡೆದ್ರು.
ಒಟ್ಟಾರೆ ಕನ್ನಡದ ವರನಟನಿಗೆ ಕೊನೆವರೆಗೂ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಕೊಡಲಿಲ್ಲ. ಕನ್ನಡದ ಮಹಾನ್ ನಟನಿಗೆ ಈ ವಿಚಾರದಲ್ಲಿ ಮಹಾಮೋಸ ಮಾಡಲಾಯ್ತು. ಆದರೇನಂತೆ ಕನ್ನಡ ಸಿನಿಪ್ರಿಯರ ಹೃದಯದಲ್ಲಿ ಅಣ್ಣಾವ್ರಿಗಿಂತ ಶ್ರೇಷ್ಟನಟ ಬೇರ್ಯಾರೂ ಇಲ್ಲ. ಪ್ರಶಸ್ತಿಗಳನ್ನೂ ಮೀರಿದ ಪ್ರೀತಿ ಸಂಪಾದಿಸಿದ ನಿಜವಾದ ರಾಜ ನಮ್ಮ ಅಣ್ಣಾವ್ರು.
ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.