ಉತ್ತರ ಕನ್ನಡ: ಕಾಳಿ ಸೇತುವೆಯ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಆರೋಪಿಸಿದೆ.
ಉತ್ತರ ಕನ್ನಡ ಜಿಲ್ಲಾಡಳಿತದ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಗೋವಾ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಕಾರವಾರದ NH 66 ರಲ್ಲಿ ಸೇತುವೆ ಕುಸಿಯಲು NHAIನ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಪ್ ಮುಖಂಡ ಮನೀಶ್ ಸಿಸೋಡಿಯಾಗೆ ಜಾಮಿನು ಮಂಜೂರು!
2013ರಲ್ಲಿ ಸೇತುವೆಯನ್ನು NHAIನ ಅಧೀನಕ್ಕೆ ವರ್ಗಾಯಿಸಲಾಗಿದ್ದು, ಹಳೆಯ ಸೇತುವೆಯನ್ನು ನಿರ್ವಹಿಸಲು ಪ್ರಾಧಿಕಾರವು ಒಪ್ಪಂದ ಮಾಡಿಕೊಂಡಿತ್ತು. ನಿರ್ವಹಣೆಯ ನಂತರ ಅವರು ಫಿಟ್ನೆಸ್ ಪ್ರಮಾಣಪತ್ರವನ್ನು ನೀಡಬೇಕಿತ್ತು. ಆದರೆ, ಯಾವುದೇ ನಿರ್ವಹಣಾ ಕಾರ್ಯಗಳನ್ನು ನಡೆಸದೆ ಪ್ರಮಾಣಪತ್ರವನ್ನು ನೀಡಿದ್ದಾರೆಂದು ತಿಳಿಸಿದ್ದಾರೆ.
ಈ ಆರೋಪಕ್ಕೆ ಪೂರಕವೆಂಬಂತೆ ತಮಿಳುನಾಡು ಮೂಲದ ಟ್ರಕ್ ಚಾಲಕ NHAI ವಿರುದ್ಧ ಈಗಾಗಲೇ ದೂರು ದಾಖಲಿಸಿದ್ದಾರೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ. ಚಾಲಕ ಬಾಲಮುರುಗನ್ ಪೂಸ್ವಾಮಿ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ನಾನು ಗೋವಾದಿಂದ ಕಾರವಾರ ಕಡೆಗೆ ಬರುತ್ತಿದ್ದಾಗ ಸೇತುವೆ ಕುಸಿದಿತ್ತು. NHAIನ ಕಳಪೆ ನಿರ್ವಹಣೆ ಮತ್ತು ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.