ಮೈಸೂರು: ಬೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ. ಮಂತ್ರಿಥರ ವರ್ತನೆ ಮಾಡು ಅಂದ್ರೆ, ಕಂತ್ರಿ ತರ ವರ್ತನೆ ಮಾಡುತ್ತಿದ್ದಾನೆ ಎಂದು MLC ಹೆಚ್.ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ. ಮುಡಾ ಸೈಟ್ ಹಂಚಿಕೆ ಸಂಬಂಧ MLC ಹೆಚ್.ವಿಶ್ವನಾಥ್ ವಿರುದ್ಧ ಸಚಿವ ಭೈರತಿ ಸುರೇಶ್ ಆರೋಪ ಮಾಡಿದ್ದಕ್ಕೆ ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಾವಶ್ಯಕವಾಗಿ ಹೆಸರೇಳುವುದು ಸರಿಯಲ್ಲ. ಸುಳ್ಳು ಹೇಳಿದ ಸಚಿವರ ಮಾತಿಗೆ ಪಕ್ಕದಲ್ಲೇ ಕುಳಿತ ಸಿಎಂ ಸಿದ್ದರಾಮಯ್ಯ ಚಪ್ಪಾಳೆ ಹೊಡೆಯುತ್ತಾರೆ. ಹಾಗಾದ್ರೆ ಸಿಎಂ ಸುಳ್ಳು ಹೇಳುವವರನ್ನ ಸಮರ್ಥಿಸಿಕೊಂಡಂತೆ. ರಾಜ್ಯ ಸರ್ಕಾರ ಮುಡಾ, ವಾಲ್ಮೀಕಿ ಹಗರಣದಲ್ಲಿ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿಗಳು ಏಕಾಂಗಿಯಾಗಿದ್ದು, ಭಯಗೊಂಡಿದ್ದಾರೆ. ಸಮರ್ಥಿಸಿಕೊಳ್ಳಲು ಯಾವುದೋ ವಿಷಯ ತರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಬಿಜೆಪಿ ಬೆದರಿಕೆ: ಸರ್ಕಾರ ಅಷ್ಟೋಂದ್ ವೀಕ್ ಆಗಿದ್ಯಾ?: ಗೃಹ ಸಚಿವ ಜಿ.ಪರಮೇಶ್ವರ
ಈಗಲೂ ಮುಡಾ ಅಕ್ರಮ ಮುಂದುವರಿದಿದೆ:
ಮುಡಾದಲ್ಲಿ ನಿವೇಶನ ಹಂಚಿಕೆ ಹಗರಣದ ಸಮಗ್ರ ತನಿಖೆಯಾಗಬೇಕಿದೆ. ಮುಡಾದಲ್ಲಿ ಈಗಲೂ ಅಕ್ರಮ ಮುಂದುವರಿದಿದೆ ಅಂತಾ MLC ಹೆಚ್.ವಿಶ್ವನಾಥ್ ಹೇಳಿದ್ದಾರೆ. ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್ ವರ್ಗಾವಣೆ ಆದ ಬಳಿಕವೂ ಅಕ್ರಮ ಮುಂದುವರಿದಿದೆ.
ದಿನೇಶ್ ಕುಮಾರ್ ವಿಧಾನಸೌದದಲ್ಲಿ ಕುಳಿತು ಈಗಲೂ ಅಕ್ರಮ ನಡೆಸುತ್ತಿದ್ದಾರೆ. ದಿನೇಶ್ ಕುಮಾರ್ ಅವರನ್ನು ಜೈಲಿಗೆ ಹಾಕಿದ್ದರೇ ಈ ರೀತಿ ಆಗುತ್ತಿರಲಿಲ್ಲ. ತಪ್ಪಿತಸ್ಥರಿಗೆ ಸರ್ಕಾರದ ಕೃಪಾಕಟಾಕ್ಷ ಇದೆ. ಇದೇ ಕಾರಣದಿಂದ ತಪ್ಪಿತಸ್ಥರು ಈಗಲೂ ಅಕ್ರಮ ಮುಂದುವರಿಸಿದ್ದಾರೆ. ನಾನು ಮತ್ತು ಶಾಸಕ ಶ್ರೀವತ್ಸ ಹೊರತುಪಡಿಸಿದರೇ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಮುಡಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.
ಇನ್ನು ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಅಂತಾ ಹೆಚ್.ವಿಶ್ವನಾಥ್ ಹೇಳಿದ್ದಾರೆ.