ರಾಮನಗರ: ಬಿಜೆಪಿ ಮುಖಂಡ ಹಾಗು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ತಂದೆ ಪುಟ್ಟಮಾದೇಗೌಡ (89) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನರಾಗಿದ್ದು ಇಂದು ಅಂತ್ಯಕ್ರಿಯೆ ನಡೆಯಲಿದೆ.
ನಿವೃತ್ತ ಶಿಕ್ಷಕ ಪುಟ್ಟಮಾದೇಗೌಡ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನವರಿಗೆ ಇನ್ನೂ ಬುದ್ದಿ ಬಂದಿಲ್ಲ, ಶಾಪ ತಟ್ಟುತ್ತೆ: ಪ್ರಮೋದ್ ಮುತಾಲಿಕ್
ಮೃತ ಪುಟ್ಟಮಾದೇಗೌಡ ಅವರಿಗೆ ಸಿ.ಪಿ ಯೋಗೇಶ್ವರ್ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಸಂಸ್ಕಾರವು ಸ್ವಗ್ರಾಮವಾದ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚನ್ನಪಟ್ಟಣಕ್ಕೆ ಭೇಟಿ ನೀಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೈವಾಧೀನರಾದ ಸಿ.ಪಿ.ಯೋಗೇಶ್ವರ್ ಅವರ ತಂದೆ, ಪುಟ್ಟಮಾದೇಗೌಡ್ರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬ ವರ್ಗಕ್ಕೆ ತನ್ನ ಸಾಂತ್ವನ ಹೇಳಿದರು.