ಬೆಂಗಳೂರು: ಹೊರವಲಯದ ಹುಳಿಮಾವು ಪ್ರದೇಶದಲ್ಲಿ ಪಾತ್ರೆ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಘಟನೆ ನಡೆದಿದೆ. ನಿನ್ನೆ ರಾತ್ರಿ 10:55ರ ಸಮಯದಲ್ಲಿ ಹುಳಿಮಾವು ಗ್ರಾಮದಲ್ಲಿನ ಸ್ಟೀಲ್ ಪಾತ್ರೆ ಅಂಗಡಿಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ.
ಸಿಲೆಂಡರ್ ಸ್ಪೋಟದ ಶಬ್ದ ಸುಮಾರು ಒಂದು ಕಿಲೋಮೀಟರ್ ವರೆಗೆ ಕೇಳಿಸಿದ್ದು, ಜನರು ಬಾಂಬ್ ಸ್ಪೋಟವಾಗಿರಬಹುದು ಎಂದು ಆತಂಕಗೊಂಡಿದ್ದರು. ಸ್ಪೋಟದ ರಭಸಕ್ಕೆ ಪಾತ್ರೆ ಅಂಗಡಿಯ ಇನ್ನೂರು ಮೀಟರ್ ಸುತ್ತಮುತ್ತಲ ಮನೆ ಅಂಗಡಿಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಜೊತೆಗೆ ಪಾತ್ರೆ ಅಂಗಡಿಯಲ್ಲಿದ್ದ ಎಲ್ಲ ಪಾತ್ರೆಗಳು ಚೂರು ಚೂರಾಗಿದ್ದು, ಅಂಗಡಿಯ ಹೊರಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಎರಡು ಸ್ಕೂಟರ್ ಗಳು ಸಂಪೂರ್ಣ ಜಖಂಗೊಂಡಿವೆ.
ಇದನ್ನೂ ಓದಿ: ದರ್ಶನ್ ಭೇಟಿ ಬೆನ್ನಲ್ಲೇ ನಟ ವಿನೋದ್ ರಾಜ್ ಇಂದು ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿ
ಘಟನೆಯಲ್ಲಿ ಪಾತ್ರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ದಾಸ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾನೆ. ಪಾತ್ರೆ ಅಂಗಡಿಯಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿದೆ. ಅದೇ ವೇಳೆ, ಅಂಗಡಿಯ ಮುಂಭಾಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನ್ನು ಚಾರ್ಜ್ ಮಾಡಲಾಗುತ್ತಿತ್ತು. ಚಾರ್ಜರ್ ತೆಗೆಯುವ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಅದರಿಂದ ಸಿಡಿದ ಕಿಡಿಯಿಂದಾಗಿ ಸ್ಪೋಟ ಸಂಭವಿಸಿರಬಹುದು ಎನ್ನಲಾಗುತ್ತಿದೆ.
ಸ್ಪೋಟ ಸಂಭವಿಸಿದ ಸಂದರ್ಭದಲ್ಲಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿನ ಮನೆಯಲ್ಲಿ ಮಲಗಿದ್ದ ಮಗವೊಂದು ಪವಾಡ ಸದೃಷ ರೀತಿಯಲ್ಲಿ ಪಾರಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.