ಮಹಾರಾಷ್ಟ್ರ, ಕೃಷ್ಣ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭೀಮಾ ನದಿ ತಟದಲ್ಲಿರುವ ದೇಗುಲಗಳಿಗೆ ಜಲದಿಗ್ಬಂಧನವಾಗಿದೆ. ಯಾದಗಿರಿಯ ಹೊರವಲಯದಲ್ಲಿರುವ ವೀರಾಂಜನೇಯ ಹಾಗೂ ಕಂಗಳೇಶ್ವರ ದೇಗುಲಗಳು ಜಲಾವೃತವಾಗಿದೆ. ಭೀಮಾ ನದಿ ನೀರು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದೆ. ಭಕ್ತರು ದೂರದಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ರಣ ಮಳೆ: ಬೆಳಗಾವಿಯ 6 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ
ಕೆರೆ ಒಡೆದು ಕೊಚ್ಚಿಹೋದ ಭತ್ತದ ಸಸಿಗಳು:
ಹಾಸನ ಜಿಲ್ಲೆಯಲ್ಲಿ ರಣ ಭೀಕರ ಮಳೆ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಬೇಲೂರು ತಾಲೂಕಿನ ಅರೆಹಳ್ಳಿ ಗ್ರಾಮದ ಕೆರೆ ಭರ್ತಿಯಾಗಿದ್ದು ಏರಿ ಒಡೆದುಹೋಗಿದೆ. ಇದರಿಂದ, ತಗ್ಗು ಪ್ರದೇಶದಲ್ಲಿನ ಉತ್ತೊಳಲು ಗ್ರಾಮದ ರೈತರ ಜಮೀನಿಗೆ ಕೆರೆ ನೀರು ನುಗ್ಗಿದೆ. ಪರಿಣಾಮ ಸುಮಾರು 12 ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಸಸಿಗಳು ಕೊಚ್ಚಿಕೊಂಡುಹೋಗಿವೆ. ಜಮೀನಿನ ಮಾಲೀಕರಾದ ಚಂದ್ರೇಗೌಡ . ಬಸವರಾಜು, ಸೀತಮ್ಮ, ಯು.ಎಂ.ಇಂದಿರಾ ಮತ್ತು ಯು.ಡಿ. ಮಂಜುನಾಥ್ ಎಂಬುವರಿಗೆ ಭಾರಿ ನಷ್ಟವಾಗಿದೆ. ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮುಂದುವರೆದ ಗಾಳಿ ಮಳೆ ಅಬ್ಬರ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಗಾಳಿ ಅಬ್ಬರ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ಹಾಂದಿ, ಕಬ್ಬಿಣ ಸೇತುವೆ, ಮಾವಿನಹಳ್ಳಿ ಗ್ರಾಮಗಳಲ್ಲಿ ಭಾರಿ ಗಾಳಿ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಭಗಳು ಉರುಳಿಬಿದ್ದಿವೆ. ಇದರಿಂದ ಈ ಮೂರು ಗ್ರಾಮಗಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರೆವಿನಿಂದ ಮರ ತೆರವು ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿ್ದ್ದಾರೆ.